ಬೆಳಗಾವಿ: ಹಿರಿಯ ರಂಗಕರ್ಮಿ, ನಾಡೋಜ ಪ್ರಶಸ್ತಿ ಪುರಸ್ಕೃತ ಏಣಗಿ ಬಾಳಪ್ಪ (103) ಅವರು ಇಂದು ಬೆಳಗ್ಗೆ (ಆ.18 ರಂದು) ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಳಗಿನ ಜಾವ 4 ಗಂಟೆಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿಯಲ್ಲಿ ಅಪಾರ ಸಾಧನೆ ಮಾಡಿದ್ದ ಏಣಗಿ ಬಾಳಪ್ಪ ನಡೆದಾಡುವ ರಂಗಭೂಮಿಯ ವಿಶ್ವಕೋಶ ಎಂದೇ ಕರೆಯಲ್ಪಡುತ್ತಿದ್ದರು.
103 ವರ್ಷದ ಏಣಗಿ ಬಾಳಪ್ಪ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿ 1914ರಲ್ಲಿ ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು.
ಹಂಪಿ ವಿವಿ, ಕರ್ನಾಟಕ ಮತ್ತು ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಇವರು, ಕೇಂದ್ರ ಸಂಸ್ಕೃತಿ ಅಕಾಡೆಮಿ ವತಿಯಿಂದ ನಾಟಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಡೋಜ ಪ್ರಶಸ್ತಿ ಭಾಜನರಾಗಿದ್ದರು. ಅಲ್ಲದೆ, ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
ಅವರ 75 ವರ್ಷಗಳ ಸಾಧನೆ ಕುರಿತು ಕುಟುಂಬದವರು ಮ್ಯೂಸಿಯಂ ನಿರ್ಮಿಸಿದ್ದಾರೆ. ಬಾಳಪ್ಪನವರು ಆದಾಯದ ಒಂದಷ್ಟು ಭಾಗವನ್ನು ಸಮಾಜ ಸೇವೆಗೂ ಮೀಸಲಿರಿಸಿದ್ದರು.
ಏಣಗಿ ಬಾಳಪ್ಪನವರು ನಾಲ್ಕು ಜನ ಹೆಣ್ಣುಮಕ್ಕಳು ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ. ನಾಳೆ (ಆಗಸ್ಟ್ 19) ಬೆಳಗ್ಗೆ 11 ಗಂಟೆಗೆ ಅವರ ಸ್ವಗ್ರಾಮ ಏಣಗಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನಕ್ಕೆ ಹಲವಾರು ರಂಗಭೂಮಿ ಕಲಾವಿದರು, ರಾಜಕೀಯ ಮುಖಂಡರು, ಸಂಘಸಂಸ್ಥೆಗಳು, ಸಾಹಿತಿಗಳು ಮತ್ತು ಬರಹಗಾರರು ಕಂಬನಿ ಮಿಡಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.