ನವದೆಹಲಿ: ಜೀವನದ ಎಲ್ಲಾ ಸನ್ನಿವೇಶಗಳಲ್ಲೂ ಮೌಲ್ಯಗಳಿಗೆ ಬದ್ಧರಾಗಿರಿ, ಇದರಿಂದ ನೀವು ಜಯಶಾಲಿಗಳಾಗಿ ಹೊರಹೊಮ್ಮುವಿರಿ, ಬದುಕಲ್ಲಿ ಏನು ಬೇಕಾದರೂ ಸಾಧಿಸುವುದಕ್ಕೆ ಇದು ಸಹಾಯಕವಾಗಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಹರಿಯಾಣದ ಕುರುಕ್ಷೇತ್ರದಲ್ಲಿನ ಕುರುಕ್ಷೇತ್ರ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟಿಕೋತ್ಸವ ಪದವಿಗಾಗಿ ಓದುವುದಕ್ಕೆ ಮುಕ್ತಾಯವಲ್ಲ, ಶಿಕ್ಷಣದ ಅಂತ್ಯವೂ ಅಲ್ಲ, ವಿದ್ಯೆ ಜೀವಮಾನದ ಪ್ರಕ್ರಿಯೆ ಎಂದಿದ್ದಾರೆ.
ಭಾರತೀಯ ಅರ್ಥದಲ್ಲಿ ಘಟಿಕೋತ್ಸವ ಶಿಕ್ಷಣದ ಮೂಲಕ ಜ್ಞಾನ ಮತ್ತು ಕೌಶಲವನ್ನು ಪಡೆದು ಸಮಾಜಕ್ಕೆ ಸೇವೆ ಸಲ್ಲಿಸುವುದಕ್ಕೆ ಅರ್ಹತೆಯನ್ನು ತಂದುಕೊಡುತ್ತದೆ. ಆದರೆ ಜಗತ್ತು ಜನರನ್ನು ನೆನಪಿಸಿಕೊಳ್ಳುವುದು ಅವರ ಮೌಲ್ಯ ಮತ್ತು ಸಮಾಜಕ್ಕೆ ಅವರು ಸಲ್ಲಿಸಿದ ಸೇವೆಯಿಂದ. ಅವರ ಆಸ್ತಿ, ಜ್ಞಾನದಿಂದ ಅಲ್ಲ ಎಂದಿದ್ದಾರೆ.
ಭಾರತಕ್ಕೆ ವಿಶ್ವಗುರು ಆಗಬೇಕು ಎಂಬ ಆಶಯವಿದೆಯೇ ಹೊರತು ಸೂಪರ್ ಪವರ್ ಆಗಬೇಕೆಂದಲ್ಲ. ದಬ್ಬಾಳಿಕೆ, ಪ್ರಭಾವ, ಪ್ರಾಬಲ್ಯ, ಶಕ್ತಿಗಳಿಂದ ಒಂದು ರಾಷ್ಟ್ರ ಸೂಪರ್ ಪವರ್ ಆಗಬಹುದು, ಇತರ ದೇಶಗಳು ಅದರ ಬಳಿಗೆ ಭಯದಿಂದ ಬರುತ್ತದೆ ಎಂದಿದ್ದಾರೆ.
‘ಆದರೆ ಭಾರತ ವಿಶ್ವಗುರುವಾದರೆ ಇತರ ರಾಷ್ಟ್ರಗಳು ನಮ್ಮೊಂದಿಗೆ ಸೇರುತ್ತವೆ, ಅವುಗಳೂ ತಮ್ಮ ಒಳಿತನ್ನು ಕಂಡುಕೊಳ್ಳುತ್ತವೆ’ ಎಂದಿದ್ದಾರೆ.
ಭಾರತವನ್ನು ವಿಶ್ವಗುರುವಾಗಿಸಲು ಕೊಡುಗೆ ನೀಡಿ ಎಂದು ಯುವ ಜನಾಂಗಕ್ಕೆ ಕರೆ ನೀಡಿದ ಅವರು, ಶ್ರೀಮಂತ ಪರಂಪರೆಯಿಂದ ಸ್ಫೂರ್ತಿ ಪಡೆಯಿರಿ ಮತ್ತು ಶ್ರೇಷ್ಠ ರಾಷ್ಟ್ರವೊಂದಕ್ಕೆ ಸಂಬಂಧಿಸಿದವರೆಂಬ ಹೆಮ್ಮೆ ಇರಲಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.