News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡ್ರೈನೇಜ್ ಅವ್ಯವಸ್ಥೆ ; ತಲೆಹೊರೆ ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ

Mangalore NEWSಮಂಗಳೂರು: ನಗರದ ಬಂದರು ಪ್ರದೇಶದ ಬಾಂಬು ಬಜಾರ್‌ನಲ್ಲಿ ರಸ್ತೆ ಹಾಗೂ ಡ್ರೈನೇಜ್ ತೀರಾ ಅವ್ಯವಸ್ಥೆಯಿದ್ದು, ಅದನ್ನು ಸರಿಪಡಿಸಲು ಒತ್ತಾಯಿಸಿ ಬಂದರು ಶ್ರಮಿಕರ ಸಂಘ (ಸಿಐಟಿಯು)ದ ನೇತೃತ್ವದಲ್ಲಿ ಸ್ಥಳೀಯ ವರ್ತಕರ ಸಹಕಾರದೊಂದಿಗೆ ಗುರುವಾರ ಬಂದರುನಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ’ಡ್ರೈನೇಜ್ ವ್ಯವಸ್ಥೆ ಆಗಲೇಬೇಕು, ವಾಣಿಜ್ಯ ಪ್ರದೇಶ ಬಂದರನ್ನು ನಿರ್ಲಕ್ಷಿಸಿದ ನಗರ ಪಾಲಿಕೆಗೆ ದಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಬಂದರು ಶ್ರಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಜ್‌ರವರು, ಬಂದರು ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ದುಡಿಯುತ್ತಿರುವ ಕಾರ್ಮಿಕರ ಆರೋಗ್ಯ ಕಾಪಾಡುವ ಹಾಗೂ ಅಲ್ಲಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಮಂಗಳೂರು ಮಹಾನಗರ ಪಾಲಿಕೆಯದ್ದಾಗಿದೆ. ಅದರೆ ಕಳೆದ ಕೆಲವು ವರ್ಷಗಳಿಂದ ಡ್ರೈನೇಜ್ ಅವ್ಯವಸ್ಥೆಯಿದ್ದು ಈ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ಮನವಿ ನೀಡಿದ್ದರೂ ಪ್ರಯೋಜನವಾಗಲಿಲ್ಲ. ಮಳೆಗಾಲದಲ್ಲಿ ಡ್ರೈನೇಜ್ ನೀರು ಮಳೆನೀರಿನೊಂದಿಗೆ ಸಮ್ಮಿಲನಗೊಂಡು ರಸ್ತೆಯಿಡೀ ತುಂಬಿರುತ್ತದೆ. ಡ್ರೈನೇಜ್ ಅವ್ಯವಸ್ಥೆಯಿಂದ ಪ್ರದೇಶದಲ್ಲಿ ವಿಪರೀತ ದುರ್ನಾತವಿದ್ದು ಸಾಂಕ್ರಾಮಿಕ ರೋಗಗಳಿಗೆ ಕಾರ್ಮಿಕರು ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಹಮಾಲಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌ರವರು ಮಾತನಾಡುತ್ತಾ, ಸ್ವಚ್ಛ ಮಂಗಳೂರಿನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ಸ್ ಆಡಳಿತಕ್ಕೆ ಮಂಗಳೂರಿನಲ್ಲಿ ಡ್ರೈನೇಜ್ ಸಮಸ್ಯೆಯನ್ನು ಪರಿಹರಿಸಲು ಇನ್ನೂ ಸಾಧ್ಯವಾಗಿಲ್ಲ. ಅದರಲ್ಲೂ ವಾಣಿಜ್ಯ ಪ್ರದೇಶವಾದ ಬಂದರು ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ದುಡಿಯುವ ಸಾವಿರಾರು ಕಾರ್ಮಿಕರ ಬದುಕನ್ನು ಕೇಳುವವರೇ ಇಲ್ಲ. ಮಾತ್ರವಲ್ಲದೆ ಅವರ ಆರೋಗ್ಯವೂ ಕೂಡ ಸಂಕಷ್ಟದಲ್ಲಿದೆ. ಹರಿಯುತ್ತಿರುವ ಡ್ರೈನೇಜ್ ನೀರಿಗೆ ತಡೆಯೊಡ್ಡಿರುವ ಅಲ್ಲಿನ ಶ್ರೀಮಂತ ಕುಳಗಳ ವಿರುದ್ಧ ಮನಪಾ ಕಠಿಣ ತೀರ್ಮಾನ ಕೈಗೊಳ್ಳುವ ಬದಲು ಅವರೊಂದಿಗೆ ಶಾಮೀಲಾಗಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ. ೧೫ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಮನಪಾ ಕಛೇರಿಗೆ ಮುತ್ತಿಗೆ, ಮೇಯರ್, ಕಮಿಷನರ್ ಅಧಿಕಾರಿಗಳಿಗೆ ಘೆರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಬಂದರು ಶ್ರಮಿಕ ಸಂಘದ ಅಧ್ಯಕ್ಷರಾದ ವಿಲ್ಲಿವಿಲ್ಸನ್‌ರವರು ಮಾತನಾಡಿ, ಮನಪಾ ಆಡಳಿತದ ಬೇಜವಾಬ್ದಾರಿಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒಣಮೀನು ವ್ಯಾಪಾಸ್ಥರ ಸಂಘದ ಅಧ್ಯಕ್ಷರಾದ ಹಾಜಿ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಕೇಶವ, ತಲೆಹೊರೆ ಕಾರ್ಮಿಕರ ಮುಖಂಡರಾದ ರಫೀಕ್ ಹರೆಕಳರವರು ಭಾಗವಹಿಸಿದ್ದರು. ಹೋರಾಟದ ತೀವೃತೆಯನ್ನು ಅರಿತ ಮನಪಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ಹೋರಾಟದ ನೇತೃತ್ವವನ್ನು ಬಂದರು ಶ್ರಮಿಕ ಸಂಘದ ಮುಖಂಡರಾದ ಮಹಮ್ಮದ್ ಮೋನು, ಮಯ್ಯದಿ, ರಫೀಕ್, ಕುಂಞಮೋನು ಮುಂತಾದವರು ವಹಿಸಿದ್ದರು.

Tags: ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top