ಚೆನ್ನೈ: ಮದ್ಯಪಾನ ಮಾಡಿ ವಾಹನ ಚಲಾಯಿಸುವ ಕಾರಣ, ಹೆದ್ದಾರಿಯಲ್ಲಿ ಮದ್ಯ ದಂಗಡಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಮದ್ಯದಂಗಡಿಗಳು ಊರಿನೊಳಕ್ಕೆ ಲಗ್ಗೆ ಇಡಲು ಪ್ರಾರಂಭಿಸಿದ್ದವು. ಇದರಿಂದ ಆಕ್ರೋಶಗೊಂಡ ಪುಟ್ಟ ಪೋರನೊಬ್ಬ, ನಡುರಸ್ತೆಯಲ್ಲೇ ಧರಣಿಗೆ ಮುಂದಾದ ಘಟನೆ ಚೆನೈನಲ್ಲಿ ನಡೆದಿದೆ.
2ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಆಕಾಶ್ ಧರಣಿಗೆ ಮುಂದಾದ ಪೋರ. ಚೆನ್ನೈ ಹೊರ ವಲಯದ ಪಾಡೂರು ಎಂಬ ಗ್ರಾಮದ ನಿವಾಸಿ ಈತ. ಇವನ ಊರಲ್ಲೀಗ ಮದ್ಯದಂಗಡಿಯೊಂದು ಆರಂಭವಾಗಿದೆ. ಇದನ್ನು ವಿರೋಧಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಈ ನಿಲುವಿಗೆ ಎದೆಗುಂದದ ಬಾಲಕ ಏಕಾಂಗಿಯಾಗಿ ಹೋರಾಟಕ್ಕೆ ನಿಂತಿದ್ದಾನೆ. ಪ್ಲೇ ಕಾರ್ಡ್ ಹಿಡಿದು ಮದ್ಯದಂಗಡಿ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾನೆ. ಇದನ್ನು ತಿಳಿದ ಪೊಲೀಸರು ತಡೆಯಲು ಯತ್ನಿಸಿದ ಪರಿಣಾಮ, ಉರಿಬಿಸಿಲನ್ನೂ ಲೆಕ್ಕಿಸದೇ ನಡುರಸ್ತೆಯಲ್ಲೇ ಧರಣಿ ಕುಳಿತು ಖಾಕಿಗಳನ್ನೂ ದಂಗುಬಡಿಸಿದ್ದಾನೆ ಆಕಾಶ್. ಧರಣಿ ಕುಳಿತಲ್ಲೇ ಓದಿನಲ್ಲಿ ಮಗ್ನನಾಗಿದ್ದಾನೆ. ಹರಸಾಹಸಪಟ್ಟ ಪೊಲೀಸರು ಕೊನೆಗೂ ಪೋರನ ಮನವೊಲಿಸಿ ಧರಣಿ ಹಿಂತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದ್ಯದಂಗಡಿ ಆರಂಭವಾದರೆ ಜನ ಹಣ ಕಳೆದುಕೊಳ್ಳುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ಹಣವಿಲ್ಲದಂತಾಗಬಹುದು. ಆದ್ದರಿಂದ ಮದ್ಯದಂಗಡಿ ಆರಂಭಿಸಬಾರದು. ಅಲ್ಲದೇ ಗ್ರಾಮಸ್ಥರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನೂ ಕೈಬಿಡಬೇಕು ಎಂದು ಪೋರ ಮಾಧ್ಯಮದ ಮೂಲಕ ಒತ್ತಾಯಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.