ವಿಜಯಪುರ: ಮೂಲತಃ ಅವರದು ಶಿಕ್ಷಕ ವೃತ್ತಿ. ವೃತ್ತಿಯಲ್ಲಿದ್ದಾಗಲೇ ಅವರಿಗೆ ಕೃಷಿಯತ್ತಲೂ ಇತ್ತಂತೆ ಚಿತ್ತ. ನಿವೃತ್ತಿಯಾಗಿದ್ದೇ ತಡ, ಕೃಷಿ ಕನಸಿನ ಸಾಕಾರಕ್ಕೆ ಮುಂದಾಗಿ ಯಶಸ್ಸೂ ಕಂಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉತ್ನಾಳ ಗ್ರಾಮದ ಚಂದ್ರಶೇಖರ ಹಿರೇಮಠ ಎಂಬುವರೇ ಆ ಅಪರೂಪದ ಕೃಷಿಕ ಶಿಕ್ಷಕ.
31 ವರ್ಷಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷದಿಂದ ಅವರು ಕೃಷಿಯತ್ತ ಮುಖ ಮಾಡಿದ್ದು, ಅದರಲ್ಲೇ ನೆಮ್ಮದಿ ಕಾಣುತ್ತಿದ್ದಾರೆ. 6 ಎಕರೆ 12 ಗುಂಟೆ ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ.
1 ಎಕರೆ ಭೂಮಿಯಲ್ಲಿ 2013 ರಲ್ಲಿಯೇ ನಿಂಬೆ ಬೇಸಾಯ ಮಾಡಿದ್ದರು. ಎರಡೂವರೆ ಇಂಚು ಬೊರವೆಲ್ ನೀರಿದ್ದು, ಕಳೆದ ಎರಡು ತಿಂಗಳಗಳ ಹಿಂದೆಯಷ್ಟೇ ಫಸಲು ಕೊಡುತ್ತಿದೆ. 115 ಗಿಡಗಳಿದ್ದು, ಒಂದು ವರ್ಷದಲ್ಲಿ 5 ಟ್ರಿಪ್ ಶೆಗಣಿ ಗೊಬ್ಬರ ಹಾಕಿರುವೆ. ಯಾವುದೇ ರಾಸಾಯನಿಕ ಗೊಬ್ಬರ ನೀಡಿಲ್ಲ. ವಾರಕ್ಕೊಮ್ಮೆ ನೀರು ಹರಿಸುವೆ. ಈಗಾಗಲೇ ಪ್ರಥಮ ಫಸಲಾಗಿ 10 ಸಾವಿರ ರೂ.ಗಳ ನಿಂಬೆಯಿಂದ ಎಲ್ಲ ಖರ್ಚು ತೆಗೆದು ಲಾಭ ಸಿಕ್ಕಿದೆ ಎನ್ನುತ್ತಾರೆ ಶಿಕ್ಷಕ ಹಿರೇಮಠ ಅವರು.
ಉಳಿದ 1 ಎಕರೆ ಭೂಮಿಯಲ್ಲಿ ಕಳೆದ ಜನವರಿಯಲ್ಲಿ ಈರುಳ್ಳಿ ಹಚ್ಚಿದ್ದಾರೆ. ಎರಡು ಟ್ರಿಪ್ ಶೆಗಣಿ ಗೊಬ್ಬರ ಹಾಕಿ, ಎರಡು ಬಾರಿ ಕಳೆ ತೆಗಿಸಲಾಗಿದೆ. 20 ಸಾವಿರ ರೂಪಾಯಿ ಖರ್ಚು ಬಂದಿದ್ದರೂ, 120 ಕ್ವಿಂಟಾಲ್ ಈರುಳ್ಳಿ ಇಳುವರಿ ಸಿಕ್ಕಿದೆ. ಇದರಿಂದ 50 ರಿಂದ 75 ಸಾವಿರ ರೂ.ಗಳ ನಿವ್ವಳ ಆದಾಯ ಸಿಗಲಿದೆ. ಕಳೆದ ವರ್ಷ 4 ಎಕರೆ ಒಣ ಬೇಸಾಯ ಭೂಮಿಯಲ್ಲಿ ಏನಿಲ್ಲವೆಂದರೂ ಒಂದೂವರೆ ಲಕ್ಷ ರೂಪಾಯಿ ಮೌಲ್ಯದಷ್ಟು ಈರುಳ್ಳಿ ಬೆಳೆ ಬೆಳೆದಿದ್ದು ಗಮನಾರ್ಹ.
ತುಂಡು ಭೂಮಿಯಲ್ಲಿಯೇ ಒಂದಿಷ್ಟು ತೆಂಗಿನ ಗಿಡ, ಚಿಕ್ಕು ಹಾಗೂ ಮಾವಿನ ಗಿಡಗಳನ್ನು ಬೆಳೆದಿದ್ದಾರೆ. ಬೆಳಿಗ್ಗೆ 6 ಗಂಟೆಗೆ ತೋಟಕ್ಕೆ ಬಂದವರು ಸಂಜೆಯವರೆಗೂ ಅಲ್ಲೇ ಠಿಕಾಣಿ ಹೂಡುತ್ತಾರೆ. ಒಂದು ಆಕಳನ್ನು ಕರೆದುಕೊಂಡು ತೋಟಕ್ಕೆ ಬರುತ್ತಾರೆ. ಬೆಳೆಗೆ ನೀರು ಹರಿಸುವುದು, ಕಳೆ ತಗೆಯುವುದನ್ನೂ ಮಾಡುವ ಮೂಲಕ ಶಿಕ್ಷಕರೋರ್ವರು ಅಪ್ಪಟ ಕೃಷಿಕರಾಗಿದ್ದಾರೆ.
ಶ್ರದ್ಧೆಯಿಂದ ಕೃಷಿ ಮಾಡಿದಲ್ಲಿ ನಮ್ಮನ್ನು ಭೂ ದೇವಿ ಕೈ ಬಿಡಲು ಸಾಧ್ಯವೆ ಇಲ್ಲ ಎನ್ನುವ ಅಚಲ ನಂಬಿಕೆ ಅವರದು. ಇದುವರೆಗೂ ಅಸಂಖ್ಯ ಮಕ್ಕಳಲ್ಲಿ ಜ್ಞಾನದ ದೀವಿಗೆ ಹಚ್ಚಿ, ಶಿಕ್ಷಣ ಕೃಷಿಗೈದ ಹಿರೇಮಠ ಅವರು, ಇದೀಗ ಅಕ್ಷರಶಃ ಕೃಷಿಕರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ: 9901112560.
ಚಿತ್ರ ಲೇಖನ: ಗುರುರಾಜ.ಬ.ಕನ್ನೂರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.