ಗದಗ: ಶರಣರು, ದಾರ್ಶನಿಕರನ್ನು ಪೂಜಿಸುವುದು ಸಾಮಾನ್ಯ. ಕಲಾವಿದರಿಗೂ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಿರುವುದು ಕೂಡ ಹಳೆಯ ಸುದ್ದಿ. ಆದ್ರೆ ಟಗರಿಗೆ ಗುಡಿ, ಗದ್ದುಗೆ ನಿರ್ಮಿಸಿ ನಿತ್ಯ ಪೂಜೆ ಮಾಡುವ ಗ್ರಾಮ ಒಂದಿದೆ.
ಫಂಟರ್ ಟಗರಿಗೊಂದು ದೇವಸ್ಥಾನ ನಿರ್ಮಾಣವಾಗಿದೆ. ಇಲ್ಲಿನ ಜನರು ದೇವರಿಗೆ ಕಾಯಿ ಒಡೆಯುವ ಬದಲು ಟಗರಿನ ಮೂರ್ತಿ ಪೂಜಿಸುತ್ತಿದ್ದಾರೆ. ಟಗರ ಕಾಳಗದಲ್ಲಿ ಸೋಲಿಲ್ಲದ ಸರದಾರನಾಗಿದ್ದ ಆ ಟಗರು ಗ್ರಾಮದ ಜನ್ರಿಗೆ ದೇವರಾಗಿದೆ. ಅರೇ ಇದೇನಪ್ಪ ಟಗರಿಗೆ ನೈವೇದ್ಯ ಸಲ್ಲಿಸಿ ಪೂಜಿಸ್ತಿದ್ದಾರಲ್ಲ. ಜೊತೆಗೆ ಟಗರಿಗೂ ಒಂದು ದೇವಸ್ಥಾನ ನಿರ್ಮಾಣವಾಗಿದೆಯಲ್ಲ ಅಂತಾ ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿ.
ಹೌದು, ಗದಗ ಜಿಲ್ಲೆಯ ಅಡವಿಸೋಮಾಪೂರ ಗ್ರಾಮದಲ್ಲಿರೋ ಟಗರಿನ ಗುಡಿ ವಿಶೇಷ ಸ್ಥಳ. ಟಗರಿಗೇಕೆ ಗುಡಿ, ಗದ್ದುಗೆ ಕಟ್ಟಿದ್ದಿರಿ ಅಂತಾ ಕೇಳಿದ್ರೆ, ಗ್ರಾಮಸ್ಥರು ಹೇಳೋ ಇದರ ಹಿಂದಿನ ಕಥೆ ಕೂಡ ಸ್ವಾರಸ್ಯಕರ. ಕಳೆದ 8 ವರ್ಷದ ಹಿಂದೆ ಗ್ರಾಮದಲ್ಲೊಂದು ಟಗರಿತ್ತು. ಅದು ಫಂಟರ್ ಟಗರಾಗಿತ್ತು. ಟಗರಿನ ಕಾಳಗಕ್ಕಾಗಿಯೇ ಅದನ್ನು ಬಳಸಿಕೊಳ್ಳಲಾಗಿತ್ತು.
ಕಾಳಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇದರ ಕೀರ್ತಿ ವ್ಯಾಪಿಸಿತ್ತು. ಹೋದ ಕಡೆಗಳಲ್ಲೆಲ್ಲ ಜಯದ ಮಾಲೆ ತನ್ನದಾಗಿಸಿಕೊಳ್ಳುತ್ತಿತ್ತು. ಹಾಗಾಗಿ ಈ ಟಗರನ್ನು ಜನರ ಪ್ರೀತಿಯಿಂದ ಗಾಮ ಎಂದು ಕರೆಯುತ್ತಿದ್ರು.
ದೇಶದಲ್ಲಿ ಎಲ್ಲೇ ಟಗರಿನ ಕಾಳಗ ನಡೆದ್ರು ಅಲ್ಲಿ ಈ ಗದುಗಿನ ಗಾಮ ಹಾಜರ್. ಒಮ್ಮೆಯೂ ಕೂಡ ಸೋಲುಂಡ ಉದಾಹರಣೆ ಇಲ್ಲ. ಹಾಗಾಗಿ ಇದನ್ನು ಸೋಲಿಲ್ಲದ ಸರದಾರ ಅಂತಾನೂ ಕರಿತಿದ್ರು. ಇದು ಟಗರಿನ ಮಾಲಿಕನಿಗೆ ಲಾಭ ತಂದು ಕೊಡೋ ಜೊತೆಗೆ ಗ್ರಾಮದ ಕೀರ್ತಿ ದೇಶದಲ್ಲಿ ಹಬ್ಬುವಂತೆ ಮಾಡಿತ್ತು.
ತಮ್ಮ ಗ್ರಾಮದ ಹೆಮ್ಮೆಯ ಪ್ರತೀಕವಾದ ಗಾಮ ಒಂದು ದಿನ ಅನೀರಿಕ್ಷಿತವಾಗಿ ಸಾವನ್ನಪ್ಪಿತು. ಇದರ ಸಾಧನೆಯನ್ನು ಅಜರಾಮರವಾಗಿಡಲು ಗ್ರಾಮಸ್ಥರು ತೀರ್ಮಾನಿಸಿ, ಗುಡಿ ಕಟ್ಟಿದ್ರು. ಕಳೆದ ೮ ವರ್ಷದಿಂದ ನಿತ್ಯ ಪೂಜಿಸೋ ಮೂಲಕ ಸಾಧನೆಯ ಟಗರಿನ ಸ್ಮರಣೆ ಮಾಡ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಫಂಟರ್ ಟಗರುಗಳಿರೋದು ಈ ಗ್ರಾಮದಲ್ಲಿ. ಇದಕ್ಕೆ ಮೂಲಕ ಪ್ರೇರಣೆ ಗದುಗಿನ ಗಾಮ. ನೂರಾರು ಟಗರುಗಳು ನಿತ್ಯ ದೇವಸ್ಥಾನದ ಎದುರು ತಾಲೀಮು ನಡೆಸುತ್ತವೆ.
ಅಡವಿ ಸೋಮಾಪೂರ ಗ್ರಾಮದಲ್ಲಿ 300 ಕ್ಕೂ ಅಧಿಕ ಟಗರುಗಳನ್ನು ಕಾಳಗಕ್ಕಾಗಿಯೇ ಸಾಕಿದ್ದಾರೆ. ಹಾಗಾಗಿ ಟಗರು ಗುಡಿಯ ಮುಂದೆ ನಿತ್ಯ ನೂರಾರು ಟಗರುಗಳ ಕಾದಾಟ ನಡೆಯುತ್ತೆ. ಇದು ಇಲ್ಲಿನ ಟಗರುಗಳ ನಡಿಸೋ ನಿತ್ಯದ ತಾಲೀಮು. ಇದಕ್ಕೆ ಕಾರಣ ಗಾಮನ ಆಶೀರ್ವಾದ ಇತರೇ ಟಗರಿಗೂ ಸಿಗುತ್ತೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ಕಾಲು ಕೆದರಿ ಕಣಕ್ಕಿಳಿದರೇ ಸಾಕು ಎದುರಾಳಿಯನ್ನು ನೆಲಕ್ಕುರಿಳಿಸದೇ ಮರಳುತ್ತಿರಲಿಲ್ಲಾ ಈ ಗದುಗಿನ ಗಾಮ. ಹೀಗಾಗಿ ಈತನ ಸಾಧನೆ ರಾಜ್ಯಕ್ಕಷ್ಟೆ ಅಲ್ಲಾ, ರಾಷ್ಟ್ರಮಟ್ಟದಲ್ಲಿಯೂ ಕೂಡ ಹೆಸರು ಮಾಡಿತು. ಆಂದ್ರ, ಮಹಾರಾಷ್ಟ್ರದಲ್ಲಿ ಗಾಮನ ಹೆಸರು ಕೇಳಿದ್ರೆ ಸಾಕು ಎದುರಾಳಿ ಟಗರಿನ ಮಾಲಿಕರಲ್ಲಿ ಭಯ. 13 ವರ್ಷಗಳ ಕಾಲ ತನ್ನ ತಾಕತ್ತಿನಿಂದಾಗಿ ಕಾಳಗದಲ್ಲಿ ತನ್ನ ಗೆಲುವಿನ ಕಹಳೆ ಮೊಳಗಿಸಿತ್ತು ಈ ಗಾಮ.
ಸ್ಪರ್ಧೆಯಲ್ಲಿ 20 ಕ್ಕೂ ಹೆಚ್ಚು ಗಧೆ, 12 ತೊಲಿ ಬಂಗಾರ, 22 ತೊಲಿ ಬೆಳ್ಳಿ, 40ಕ್ಕೂ ಅಧಿಕ ಕಡೆಗಳನ್ನು ಪಡೆದುಕೊಂಡಿದೆ. ಜೊತೆಗೆ ಫ್ಯಾನ್, ಟಿವಿ, ಫ್ರಿಜ್, ವಾಷಿಂಗ್ ಮಷೀನ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ತನ್ನದಾಗಿಸಿಕೊಂಡಿದೆ.
ಬದುಕಿನಲ್ಲಿ ತನ್ನ ಸಾಧನೆಯಿಂದಾಗಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿತ್ತು, ಗದಗಿನ ಬಾಬು ಭಾಂಡಗೆ ಈ ಟಗರಿನ ಮಾಲಿಕರು. ಇದನ್ನು ಅವರ್ಯಾವತ್ತು ಪ್ರಾಣಿಯಂತೆ ಕಾಣಲಿಲ್ಲ. ಬದಲಾಗಿ ಮನೆಯ ಸದಸ್ಯನಂತೆ ಕಂಡು ಪ್ರೀತಿಯಿಂದ ಬೆಳೆಸಿದ್ರು. ತನ್ನ ಬಡತನವನ್ನೇ ನಿವಾರಿಸಿದ ಗಾಮ ತನ್ನ ಆರಾಧ್ಯ ದೈವ. ಅದರ ಋಣ ನಾನೆಂದು ತೀರಿಸಲು ಅಸಾಧ್ಯ ಅಂತಾರೆ ಬಾಬು ಭಾಂಡಗೆ.
ಮಾಲಿಕನ ಬಡತನ ಹಿಂಗಿಸಿದ ಗಾಮ, ಗ್ರಾಮಸ್ಥರಿಗೆ ದೇವರಾಗಿದೆ. ಸೋಲಿಲ್ಲದ ಸರದಾರನ ಗೆಲುವಿನ ಸವಾರಿ ಈಗ ನಮಗೆ ನೆನಪು ಮಾತ್ರ. ಆದರೆ ಇದರ ಸ್ಮರಣೆ ಮಾಡೋ ಮೂಲಕವಾದ್ರು ಗ್ರಾಮಸ್ಥರು ಸನ್ನಡತೆಯತ್ತ ಸಾಗಿದ್ದಾರಲ್ಲ ಅನ್ನೋದೇ ವಿಶೇಷ.
-ಲೋಕೇಶ ಹಿರೇಮಠ, ಗದಗ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.