ಭುವನೇಶ್ವರ: ಭಾರತ 20 ದಿನಗಳ ಅಂತರದಲ್ಲಿ ಅತೀ ಎತ್ತರ ಮತ್ತು ಕಡಿಮೆ ಎತ್ತರದಲ್ಲಿ ಹಾರುವ ಎರಡು ದೇಶೀಯ ನಿರ್ಮಿತ ಇನ್ಟರ್ಸೆಪ್ಟರ್ ಕ್ಷಿಪಣಿಗಳ ಯಶಸ್ವಿ ಉಡಾವಣೆಯ ನಂತರ, ಈಗ ವೈಮಾನಿಕ ದಾಳಿಗಳಿಂದ ಮೆಟ್ರೋಗಳ ರಕ್ಷಣೆಗೆ ಖಂಡಾಂತರ ಕ್ಷಿಪಣಿ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲು ಯೋಜಿಸುತ್ತಿದೆ.
ಕೇಂದ್ರ ಸರ್ಕಾರ ಖಂಡಾಂತರ ಕ್ಷಿಪಣಿ ರಕ್ಷಣಾ (ಬಿಎಂಡಿ) ವ್ಯವಸ್ಥೆ ಆರಂಭದಲ್ಲಿ ದೆಹಲಿಯಲ್ಲಿ ಸ್ಥಾಪಿಸಲು ಚಿಂತನೆ ನಡೆಸುತ್ತಿದೆ. ಹಲವು ಸಂಘಟಿತ ಕ್ಷಿಪಣಿ ಪರೀಕ್ಷೆಗಳ ನಂತರ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವ ಬಗ್ಗೆ ವರ್ಷಾಂತ್ಯದೊಳಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹಿರಿಯ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಾಯುಮಂಡಲದ ಹೊರಗೆ ಮತ್ತು ಒಳಗಿನ ಪ್ರದೇಶಗಳಿಗೆ ಪ್ರವೇಶಿಸುವ ವಿರೋಧಿ ಕ್ಷಿಪಣಿಗಳನ್ನು ನಿಗ್ರಹಿಸುವ ಎರಡು ಪದರದ ಬಿಎಂಡಿ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ. ಈ ಎರಡೂ ವ್ಯವಸ್ಥೆಗಳನ್ನು 2006ರಲ್ಲಿ 13 ಬಾರಿ ಪರೀಕ್ಷಿಸಲಾಗಿದೆ.
ಪೃಥ್ವಿ ರಕ್ಷಣಾ ಕ್ಷಿಪಣಿ (ಪಿಡಿವಿ), ವಾಯುಮಂಡಲದ ಅತೀ ಎತ್ತರದಲ್ಲಿ ಗುರಿಯನ್ನು ನಾಶಪಡಿಸುವ ಸಾಮರ್ಥ್ಯದ ಕ್ಷಿಪಣಿಯನ್ನು ಫೆ.11ರಂದು ಯಶಸ್ವಿ ಪರೀಕ್ಷೆ ನಡೆಸಲಾಗಿದ್ದು, ಕಡಿಮೆ ಎತ್ತರದಲ್ಲಿ ಶತ್ರು ಕ್ಷಿಪಣಿ ನಾಶಪಡಿಸುವ ಅಡ್ವಾನ್ಸ್ ಏರಿಯಾ ಡಿಫೆನ್ಸ್ (ಎಎಡಿ) ಇನ್ಟರ್ಸೆಪ್ಟರ್ ಕ್ಷಿಪಣಿಯನ್ನು ಮಾ.1ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ದೆಹಲಿಯಲ್ಲಿ ಈ ವ್ಯವಸ್ಥೆ ಕಾರ್ಯಗತಗೊಂಡ ಬಳಿಕ ಇತರ ಮೆಟ್ರೋಗಳಲ್ಲಿ ಇದನ್ನು ನಿಯೋಜಿಸಲಾಗುವುದು. ಇದು 2000 ಕಿ.ಮೀ. ದೂರದಲ್ಲಿ ಶತ್ರು ಕ್ಷಿಪಣಿಯನ್ನು ನಾಶಪಡಿಸುವ ಸಮರ್ಥ್ಯ ಹೊಂದಿದೆ. ಇನ್ನು 5000 ಕಿ.ಮೀ. ಅಂತರದಲ್ಲಿ ಶತ್ರು ಕ್ಷಿಪಣಿ ನಾಶಪಡಿಸುವ ಹಂತ-2 ಕ್ಷಿಪಣಿಯನ್ನು ಡಿಆರ್ಡಿಒ ಅಭಿವೃದ್ಧಿಪಡಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.