ಮೊರಾದಾಬಾದ್: ಕೇಂದ್ರ ಸರ್ಕಾರದ ಅನಾಣ್ಯೀಕರಣ ನೀತಿಯಿಂದಾಗಿ ಜನರಿಗೆ ಆಗಿರುವ ಅನಾನುಕೂಲತೆಯನ್ನು ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದಿಟ್ಟ ನಿರ್ಧಾರ ದೇಶದಲ್ಲಿ ಬಡತನ, ಭ್ರಷ್ಟಾಚಾರ, ಕಪ್ಪು ಹಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಪರಿವರ್ತನ್ ಯಾತ್ರೆ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, ಬಡ ಜನರ ಜನ್-ಧನ್ ಖಾತೆಗಳಲ್ಲಿ ಕಪ್ಪು ಹಣ ಹೂಡಿಕೆ ಮಾಡುವವರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 8ರ ನೋಟು ನಿಷೇಧದ ನಿರ್ಧಾರ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಕೂಡಿಟ್ಟ ಶ್ರೀಮಂತರನ್ನು ಬಡಬಡಿಸುವಂತೆ ಮಾಡಿದೆ. ಪ್ರಾಮಾಣಿಕರು ಬ್ಯಾಂಕ್ಗಳ ಮುಂದೆ ಸಾಲುಗಟ್ಟಿ ನಿಂತಿದ್ದರೆ, ಶ್ರೀಮಂತರು ಬಡವರ ಮನೆ ಮುಂದೆ ಸಾಲು ಸಾಲಾಗಿ ನಿಲ್ಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜನರು ಬ್ಯಾಂಕುಗಳು, ಎಟಿಎಂಗಳ ಮುಂದೆ ದೀರ್ಘ ಸಾಲಗಳಲ್ಲಿ ನಿಲ್ಲುವ ಬಗ್ಗೆ ಹೇಳುತ್ತಿದ್ದರು. ಆದರೆ ಈ ಹಿಂದೆ ಜನರು ತೈಲ ಮತ್ತು ಆಹಾರ ಖರೀದಿಗೆ ಸಾಲುಗಟ್ಟಿ ನಿಲ್ಲುತ್ತಿದ್ದ ಬಗ್ಗೆ ನೆನಪಿಸಿದರು.
ಅನಾಣ್ಯೀಕರಣದಿಂದ ಉಂಟಾಗಿರುವ ಅನಾನುಕೂಲತೆ 50 ದಿನಗಳಲ್ಲಿ ಕೊನೆಗೊಳ್ಳಲಿದೆ. ಈಗ ಜನರಲ್ಲಿ ಯಾತನೆ ಉಂಟಾಗಿದ್ದರೂ, ಸದ್ಯ ಪರಿಸ್ಥಿತಿಗಳು ಸುಧಾರಿಸುತ್ತಿದೆ. ಈ ದೇಶದ ಪ್ರಜೆಗಳಿಗೆ ನನ್ನ ಸೆಲ್ಯೂಟ್ ಎಂದು ಹೇಳಿದ ಮೋದಿ, ಜನರ ಈ ‘ಕ್ಯೂ’ ದೇಶದಲ್ಲಿ ಇತರ ‘ಕ್ಯೂ’ಗಳನ್ನು ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ.
ಶ್ರೀಮಂತರು ಎಂದಾದರೂ ಬಡವರ ಕಾಲು ಹಿಡಿಯುವುದನ್ನು ನೋಡಿದ್ದೀರೆ ಎಂದು ಕೇಳಿದ ಪ್ರಧಾನಿ ಅವರು, ಅಪ್ರಾಮಾಣಿಕರು ಬ್ಯಾಂಕ್ಗಳಿಗೆ ಹೋಗಲು ಸಾಧ್ಯವಾಗದ ಕಾರಣ ಬಡವರ ಮನೆ ಮುಂದೆ ಸಾಲು ಸಾಲು ನಿಂತು ಅವರನ್ನು ತಪ್ಪು ಹಾದಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ದೇಶ ಭ್ರಷ್ಟಾಚಾರದ ಹಿಂದೆ ನಿಂತಿಲ್ಲವೇ? ನಾವು ಈ ಭ್ರಷ್ಟಾಚಾರದ ಕಳೆಯನ್ನು ಕಿತ್ತು ಹಾಕುವ ಅಗತ್ಯವಿಲ್ಲವೇ? ಭ್ರಷ್ಟಾಚಾರ ತಾನಾಗಿ ದೂರ ಹೋಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರ ಎಲ್ಲ ಸಮಸ್ಯೆಗಳ ಮೂಲವಾಗಿದ್ದು, ಇದರ ವಿರುದ್ಧ ಹೋರಾಡಲು ಕ್ರಮಗಳನ್ನು ತೆಗೆದುಕೊಂಡ ಬಗ್ಗೆ ಜನರು ತನ್ನನ್ನು ಟೀಕಿಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ನನ್ನ ದೇಶದಲ್ಲಿ ಜನರು ನನ್ನನ್ನೇ ಆರೋಪಿಸುತ್ತಿರುವುದು ಆಶ್ಚರ್ಯಕರ. ದೇಶವನ್ನು ಲೂಟಿ ಮಾಡಿವರನ್ನೇ ಉತ್ತರದಾಯಿ ಆಗಿಸುತ್ತಿದ್ದಾರೆ. ನನಗೆ ಇದರಲ್ಲಿ ಯಾವುದೇ ಹಿತಾಸಕ್ತಿ ಇಲ್ಲ. ನಾನೊಬ್ಬ ಫಕೀರ. ನಾನು ಬೇಕಾದರೇ ನನ್ನ ಚೀಲವನ್ನು ಪ್ಯಾಕ್ ಮಾಡಿ ತೆರಳುತ್ತೇನೆ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.