ನವದೆಹಲಿ : ಭಾರತದ ವಿರುದ್ಧ ಒಟ್ಟಾಗಿ ಹೋರಾಡಲು ಪಾಕಿಸ್ಥಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ಗೆ ಉಗ್ರ ಬುರ್ಹಾನ್ ವಾನಿ ಕರೆ ಮಾಡಿರುವ ವಿಚಾರ ಇದೀಗ ಬಯಲಾಗಿದೆ.
ಮೂಲಗಳ ಪ್ರಕಾರ ಭಾರತದ ಗುಪ್ತಚರ ವಾಹಿನಿಗಳು ದೂರವಾಣಿ ಕರೆಯನ್ನು ಟ್ಯಾಪ್ ಮಾಡಿದ್ದು, ಉಗ್ರ ಹಫೀಜ್ ಸಯೀದ್ ಜೊತೆ ಬುರ್ಹಾನ್ ವಾನಿ ಮಾತನಾಡಿರುವ ಆಡಿಯೋ ಟೇಪ್ವೊಂದು ಬಹಿರಂಗಗೊಂಡಿದೆ.
ಉಗ್ರ ಬುರ್ಹಾನ್ ವಾನಿ ಹಫೀಜ್ ಸಯೀದ್ ಅವರೊಂದಿಗೆ ಕುಶಲೋಪರಿ ವಿಚಾರಿಸಿ ತದನಂತರ, ನಿಮ್ಮ ಸಹಾಯ, ಸಹಕಾರ ನಮಗೆ ಬೇಕು. ಶತ್ರುಗಳೊಂದಿಗೆ ಹೋರಾಡಲು ನಿಮ್ಮಂತಹವರ ಸಹಕಾರವೊಂದಿದ್ದರೆ ಅವರನ್ನು ಸುಲಭವಾಗಿ ಸೋಲಿಸಬಹುದು. ಈಗಾಗಲೇ ಶತ್ರುಗಳು ಬಹುತೇಕ ಸೋಲನ್ನು ಒಪ್ಪಿಕೊಂಡಿದ್ದಾರೆ. ಇದೇ ಪರಿಸ್ಥಿತಿಯನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ನಿಮ್ಮ ಜೊತೆ ನನಗೆ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾನೆ.
ಇದಕ್ಕೆ ಪ್ರತ್ಯುತ್ತರ ನೀಡಿದ ಹಫೀಜ್ ಸಯೀದ್, ನೀನು ಮಾಡುತ್ತಿರುವ ಕೆಲಸಗಳ ಬಗ್ಗೆ ನಮಗೆ ಹೆಮ್ಮೆಯಿದೆ. ನೀವು ಕಾಶ್ಮೀರದಲ್ಲಿ ಎಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೀರಿ ಎಂಬ ಅರಿವೂ ಇದೆ. ನಿಮಗೆ ಏನು ಬೇಕಾದರೂ ಸಹಾಯ ಮಾಡಲು ನಾವು ತಯಾರಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.
ನಂತರ ಮಾತನಾಡಿದ ಬುರ್ಹಾನ್ ವಾನಿ, ಶತ್ರುಗಳನ್ನು ಎದುರಿಸಲು ನಾವು ಎಲ್ಲಾ ರೀತಿಯಲ್ಲಿ ದಾಳಿ ನಡೆಸಲಿದ್ದೇವೆ. ಇದಕ್ಕಾಗಿ ನಮಗೆ ಅಗತ್ಯವಿರುವ ಹಣ, ಶಸ್ತ್ರಾಸ್ತ್ರಗಳ ಬೆಂಬಲ ಬೇಕಾಗಿದೆ. ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೊಯ್ಬಾ ಸಂಘಟನೆಗಳು ಒಗ್ಗಟ್ಟಾಗಿ ಭಾರತದ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾನೆ.
ಇವೆಲ್ಲವೂ ಭಾರತದ ಗುಪ್ತಚರ ವಾಹಿನಿ ಟ್ಯಾಪ್ ಮಾಡಿದ ಉಗ್ರ ಬುರ್ಹಾನ್ ವಾನಿ ಮತ್ತು ಉಗ್ರ ಹಫೀಜ್ ಸಯಿದ್ ನಡುವಿನ ಸಂಭಾಷಣೆಯ ಆಡಿಯೋ ಟೇಪ್ವೊಂದರಲ್ಲಿದೆ. ಇದರ ಪ್ರಕಾರ ಎನ್ಕೌಂಟರ್ನಲ್ಲಿ ಹತ್ಯೆಯಾದ ಬುರ್ಹಾನ್ ವಾನಿ ಅಮಾಯಕ ಎಂದು ಹೇಳುತ್ತಿದ್ದ ಪಾಕಿಸ್ಥಾನದ ಬಣ್ಣ ಬಯಲಾದಂತಾಗಿದೆ.
ಕೆಲ ತಿಂಗಳ ಹಿಂದೆ ಕಾಶ್ಮೀರಿ ಉಗ್ರರ ಪೋಸ್ಟರ್ಬಾಯ್ ಎಂದೇ ಖ್ಯಾತನಾಗಿದ್ದ ಬುರ್ಹಾನ್ ವಾನಿಯನ್ನು ಭಾರತೀಯ ಸೇನೆ ಎನ್ಕೌಂಟರ್ನಲ್ಲಿ ಹತ್ಯೆಗೈದಿತ್ತು. ಆದರೆ ಪಾಕಿಸ್ಥಾನ ಮತ್ತು ಪ್ರತ್ಯೇಕತಾವಾದಿಗಳು ಬುರ್ಹಾನ್ ವಾನಿ ಅಮಾಯಕ ಯುವಕ, ಈತನನ್ನು ಬೇಕೆಂದೇ ಎನ್ಕೌಂಟರ್ ಮಾಡಲಾಗಿದೆ ಎಂದು ವಿರೋಧಿಸಿ ಬಂದ್ ಕರೆದಿತ್ತು. ಸುಮಾರು 100 ದಿನಕ್ಕೂ ಹೆಚ್ಚು ಕಾಲ ಕಾಶ್ಮೀರದಲ್ಲಿ ಅಶಾಂತಿ, ಹಿಂಸಾಚಾರ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹರಸಾಹಸ ಪಟ್ಟಿತ್ತು.
ಇದೀಗ ಈ ಆಡಿಯೋ ಟೇಪ್ ಕುರಿತಂತೆ ಪಾಕಿಸ್ಥಾನ ಮತ್ತು ಪ್ರತ್ಯೇಕತಾವಾದಿಗಳು ಯಾವ ರೀತಿಯ ಬಣ್ಣ ಬಳಿಯಲಿವೆ ಎಂದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.