ಮಂಗಳೂರು : ಹಲವಾರು ದಶಕಗಳಿಂದ ಭಾರತದಲ್ಲಿ ಕಪ್ಪು ಹಣ ಹಾಗೂ ಭ್ರಷ್ಟಾಚಾರ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಭಾರತವನ್ನು ಆಳ್ವಿಕೆ ಮಾಡಿದ ಈವರೆಗಿನ ಅನೇಕ ಸರಕಾರಗಳು ಕೂಡ ಇವುಗಳನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿರದಿರುವುದು ಈ ಮಣ್ಣಿನ ವಿಪರ್ಯಾಸ. ಸೂಕ್ತವಾದಂತಹ ಕಾನೂನಾತ್ಮಕ ಕ್ರಮಗಳಿಲ್ಲದಿದ್ದರಿಂದ ಖೋಟಾ ನೋಟುಗಳ ಹಾವಳಿ ಭಾರತದಾದ್ಯಂತ ಪಸರಿಸಿಕೊಂಡಿದೆ. ಅಷ್ಟೇ ಅಲ್ಲದೇ ಡ್ರಗ್ ಮಾಫಿಯಾ ಹಾಗೂ ರಿಯಲ್ ಎಸ್ಟೇಟ್ ಮಾಫಿಯಗಳು ನಗದು ವ್ಯವಹಾರಗಳಿಗೆ ನಿಯಂತ್ರಣವಿಲ್ಲದ ಕಾರಣ ಸಶಕ್ತವಾಗಿ ತಲೆ ಎತ್ತಿವೆ. ರೂ. 500 ಹಾಗೂ ರೂ. 1000 ದ ನೋಟುಗಳ ಮಾನ್ಯತೆಯನ್ನು ರದ್ದು ಪಡಿಸುವ ಮುಖಾಂತರ ಕೇಂದ್ರ ಸರಕಾರ, ಹಾಗೂ ಮೇಲಿನ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಉತ್ತರವನ್ನು ಕೊಟ್ಟಿರುವುದು ಅತ್ಯಂತ ಸ್ವಾಗತಾರ್ಹ, ಇದಕ್ಕೆ ಕಾರಣಿಭೂತರಾದ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಪೂರೈಕೆಯಾಗುತ್ತಿದ್ದದ್ದು ಬಹುತೇಕ ನಗದು ವ್ಯವಹಾರಗಳ ಮೂಲಕ, ಭಾರತದ ಮೇಲೆ ಈ ಹಿಂದೆ ಜರುಗಿದ ಭಯೋತ್ಪಾದಕ ದಾಳಿಗಳಲ್ಲಿ ಇದರ ಬಗ್ಗೆ ಆಧಾರಗಳೂ ಸಿಕ್ಕಿದೆ. ಈ ಯೋಜನೆಯ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಕೆಗೆ ತೊಡಕುಂಟಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಇದು ಅತಿ ದೊಡ್ಡ ಹೆಜ್ಜೆ ಆಗಿದೆ. ಡ್ರಗ್ ಮಾಫಿಯಾ ಹಾಗೂ ಭೂಮಾಫಿಯಾಗಳಿಗೂ ಕೂಡ ಈ ಮುಖೇನ ಕಡಿವಾಣ ಬಿದ್ದಿದ್ದು ಬರುವಂತಹ ದಿನಗಳಲ್ಲಿ ಇವುಗಳನ್ನು ನಿಯಂತ್ರಿಸುವ ಕಾರ್ಯ ಸುಲಭವಾಗಲಿದೆ. ಈ ಯೋಜನೆಯ ಮೂಲಕ ಭ್ರಷ್ಟಾಚಾರ ನಿಗ್ರಹವಾಗುವುದಷ್ಟೇ ಅಲ್ಲದೆ ತೆರಿಗೆ ವಂಚಿಸುತ್ತಿದ್ದವರಿಗೆ ಅನಿವಾರ್ಯತೆ ಒದಗಿ ತೆರಿಗೆ ಪಾವತಿ ಹೆಚ್ಚುತ್ತದೆ. ತೆರಿಗೆ ಪಾವತಿ ಹೆಚ್ಚುವುದರಿಂದ ಭಾರತದ ಅಭಿವೃದ್ಧಿಯ ಓಟ ಮತ್ತಷ್ಟು ವೇಗ ಪಡೆದುಕೊಳ್ಳುವುದಷ್ಟೇ ಅಲ್ಲದೆ ಭಾರತದ ಜಿ.ಡಿ.ಪಿ. ಕೂಡ ವೃದ್ಧಿಸುತ್ತದೆ. ಭಾರತದ ಅಭಿವೃದ್ಧಿಯ ಪಥದಲ್ಲಿ ಇದೊಂದು ಮಹತ್ತರ ಹೆಜ್ಜೆಯಾಗಿದ್ದು ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.