ಪುಣೆ : ಪುಣೆಯಲ್ಲಿನ ಭೈರಂಜೀ ಜೀಜೋಭಾಯ್ ಮೆಡಿಕಲ್ ಕಾಲೇಜ್ (ಬಿಜೆಎಮ್ಸಿ)ನಲ್ಲಿ ವಿದ್ಯಾರ್ಥಿನಿಯರಿಗೆ ರಾತ್ರಿ 11.15 ರ ನಂತರ ಕಾಲೇಜ್ ಲೈಬ್ರರಿಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಈ ನಿಷೇಧವನ್ನು ಹೇರಲಾಗಿದೆ. ಹಾಸ್ಟೆಲ್ನಲ್ಲೂ ಕೆಲವು ನೀತಿ-ನಿಯಮಗಳಿವೆ. ಹೀಗೆಯೇ ಲೈಬ್ರರಿಯಲ್ಲೂ ನಿಯಮವನ್ನು ತಂದಿದ್ದೇವೆ. ಇದು ಅವರ ಸುರಕ್ಷಾ ದೃಷ್ಟಿಯಿಂದ ಎಂದು ಬಿಜೆಎಮ್ಸಿ ಕಾಲೇಜಿನ ಡೀನ್ ಅಜಯ್ ಚಂದನವಾಲೆ ಈ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
ಪೋಸ್ಟ್ ಗ್ರಾಜ್ಯುಯೇಟ್, ಇಂಟರ್ನ್ ಮತ್ತು ಕಾಲೇಜಿನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಯುವ ವೈದ್ಯರುಗಳಿಗೆ ಸಾಸೂನ್ ಜನರಲ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು, ಕಾರ್ಯ ನಿರ್ವಹಣೆಯನ್ನು ನೀಡಲಾಗುತ್ತದೆ. ಇದು ಕೆಲವೊಮ್ಮೆ ಬೆಳಗ್ಗೆಯೂ ಇರಬಹುದು ಅಥವಾ ರಾತ್ರಿಯೂ ಇರಬಹುದು. ಆದರೆ ಇಂಥಹ ವಿದ್ಯಾರ್ಥಿನಿಯರು ಲೈಬ್ರರಿಗೆ ಓದಲು ಹೋಗಬೇಕೆಂದಾಗ ಮಾತ್ರ ಅದಕ್ಕೆ ಮಧ್ಯರಾತ್ರಿಯ ಕಾರಣದೊಂದಿಗೆ ನಿಷೇಧವನ್ನು ಹೇರಲಾಗುತ್ತದೆ.
ರಾತ್ರಿ 11.15 ರ ನಂತರ ವಿದ್ಯಾರ್ಥಿನಿಯರು ಲೈಬ್ರರಿಯಲ್ಲಿ ಇರುವಂತಿಲ್ಲ. ಒಂದೊಮ್ಮೆ ಸ್ವಲ್ಪ ಹೊತ್ತು ಇದ್ದರೂ ಗಾರ್ಡ್ಸ್ಗಳು ಬಂದು ವಿದ್ಯಾರ್ಥಿನಿಯರಿಗೆ ಅಲ್ಲಿಂದ ಹೊರ ಹೋಗುವಂತೆ ಎಚ್ಚರಿಕೆ ನೀಡುತ್ತಾರೆ. ಆದರೆ ಪುರುಷ ವಿದ್ಯಾರ್ಥಿಗಳು ಮಾತ್ರ ಸಮಯದ ಪರಿಧಿಯಿಲ್ಲದೆ ಲೈಬ್ರರಿಯಲ್ಲಿ ಎಷ್ಟು ಹೊತ್ತು ಬೇಕಾದರೂ ಇರಬಹುದು.
ಈ ರೀತಿಯ ಆದೇಶವನ್ನು ಯಾವುದೇ ರಾಜ್ಯದಲ್ಲಿಯೂ ಶಿಕ್ಷಣ ಸಂಸ್ಥೆಗಳು ನೀಡುವಂತಿಲ್ಲ ಎಂಬುದನ್ನು ಯುಜಿಸಿಯ ಸಕ್ಷಮ್ ವರದಿಯ ಮಾರ್ಗಸೂಚಿಗಳಲ್ಲಿ ಉಲ್ಲೇಖಿಸಲಾಗಿದೆ. ಲಿಂಗ ತಾರತಮ್ಯ ಮಾಡಿ ಯಾವುದೇ ಆದೇಶವನ್ನು ನೀಡುವಂತಿಲ್ಲ. ಬದಲಾಗಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದೆ.
ಆದರೆ ಬಿಜೆಎಂಸಿ ಕಾಲೇಜಿನಲ್ಲಿ ಹೇರಲಾಗಿರುವ ನೂತನ ಆದೇಶದಿಂದ ಬೇಸತ್ತ ವಿದ್ಯಾರ್ಥಿನಿಯರು ಅಸಮಾಧಾನಗೊಂಡಿದ್ದಾರೆ. ಮುಂದಿನ ತಿಂಗಳಲ್ಲಿ ಅವರು ವೈದ್ಯಕೀಯ ಪದವಿ ಪಡೆಯಲು ಅವರು ಒಂದು ವರ್ಷ ಇಂಟರ್ನ್ಶಿಫ್ ಎಂಟ್ರೆನ್ಸ್ ಎಕ್ಸಾಮ್ಗೆ ಓದಲು ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ಹೇಳಿದ್ದಾರೆ. ಅಲ್ಲದೇ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಜನರಲ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದ್ದು ವಿದ್ಯಾರ್ಥಿನಿಯರಿಗೆ ಓದಲು ಸಮಯ ಸಿಗದಂತಾಗಿದೆ. ಹೀಗಾಗಿ ರಾತ್ರಿಯ ಹೆಚ್ಚಿನ ಸಮಯ ಓದಲು ಲೈಬ್ರರಿಗೆ ಹೋಗುವ ಅನಿವಾರ್ಯತೆಯಿದೆ.
ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳ ದರ ದುಬಾರಿಯಾಗಿದ್ದು, ನಾವು ಲೈಬ್ರರಿಯಲ್ಲಿ ದೊರಕುವ ಪುಸ್ತಕಗಳ ಸಹಾಯದಿಂದ ಓದುತ್ತ್ತಿದ್ದೆವು ಆದರೆ ಇದೀಗ ಡೀನ್ ಅವರ ಈ ತೀರ್ಮಾನದಿಂದ ಪುಸ್ತಕಕ್ಕಾಗಿ ಪರದಾಡುವಂತಾಗಿದೆ ಎಂಬುದು ಕೆಲ ವಿದ್ಯಾರ್ಥಿನಿಯರ ಅಳಲು.
ಕಾಲೇಜಿನ ಡೀನ್ ಚಂದನ್ವಾಲೆಯವರನ್ನು ಈ ಕುರಿತು ಕೇಳಿದಾಗ, ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ರೀತಿಯ ನಿಷೇಧ ಹೇರಿದ್ದೇವೆ. ಇದರಲ್ಲಿ ಯಾವುದೇ ತಾರತಮ್ಯವಿಲ್ಲ. ಪುರುಷರಿಗಿಂತ ಮಹಿಳೆಯರ ಸುರಕ್ಷತೆ ಮುಖ್ಯ. ಪುರುಷರಿಗೆ ಸಮಯ ನಿಬಂಧನೆಯನ್ನು ಶೀಘ್ರದಲ್ಲೇ ಜಾರಿ ಮಾಡಲಾಗುತ್ತದೆ. ನೀತಿ ಮತ್ತು ನಿಯಮಗಳನ್ನು ಅವರ ಹಿತದೃಷ್ಟಿಯಿಂದಲೇ ಜಾರಿ ಮಾಡಿರುವುದರಿಂದ ಅದರ ಪಾಲನೆ ಅತ್ಯಗತ್ಯ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.