ಮಂಗಳೂರು : ಮೈಸೂರಿನಲ್ಲಿ ನ.4 ರ ರಾತ್ರಿ ಟಿಪ್ಪು ಜಯಂತಿ ವಿರೋಧಿ ಸಭೆಯಲ್ಲಿ ಭಾಗವಹಿಸಿ ವಾಪಾಸ್ಸು ಮನೆಗೆ ಹೋಗುತ್ತಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಶ್ರೀ ರವಿ ಮಾಗಳಿಯವರನ್ನು ಬರ್ಬರವಾಗಿ ಕೊಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಛಿದ್ದು, ಕೆಲವು ಭಯೋತ್ಪಾದಕ ಬೆಂಬಲಿತ ಸಂಘಟನೆಗಳ ಸದಸ್ಯರು ಸಮಾಜದಲ್ಲಿ ಭೀತಿ ಹುಟ್ಟಿಸಲು ಯತ್ನಿಸುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಘ ಪರಿವಾರದವರ ವಿರುದ್ಧ ಹೋರಾಡಿ ಎಂದು ರಣ ವೀಳ್ಯ ನೀಡಿರುವುದೆ ಸಮಾಜ ಘಾತಕರಿಗೆ ಇಂತಹ ಕೃತ್ಯ ನಡೆಸಲು ಪ್ರಚೋದನೆ ನೀಡಿದಂತಾಗಿದೆ. ಕೇವಲ ಓಟಿಗಾಗಿ ಸಾಮಾಜಿಕ ಮೌಲ್ಯಗಳಿಗೆ ಯಾವುದೇ ಬೆಲೆ ನೀಡದೆ ಮುಖ್ಯಮಂತ್ರಿಗಳು ಟಿಪ್ಪು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಹೊರಟಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣವಾಗಲಿದೆ. ಕಳೆದ ವರ್ಷ ಟಿಪ್ಪು ಜಯಂತಿಯ ಆಚರಣೆಯಲ್ಲಿ ಉಂಟಾದ ಕಾನೂನು ಸುವ್ಯವಸ್ಥೆಯ ವಿಫಲತೆಯಿಂದ ಪಾಠಕಲಿಯದೆ ಟಿಪ್ಪು ಜಯಂತಿ ಮಾಡಿಯೇ ಸಿದ್ಧ ಎಂಬ ಗೃಹ ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮುಖ್ಯ ಕಾರಣವಾಗಿದ್ದು ಬಿಜೆಪಿ ಯುವ ಮೋರ್ಚಾ ಮುಖಂಡ ರವಿ ಹತ್ಯೆಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ.
ಹೈಕೋರ್ಟಿನ ಚಾಟಿ ಏಟಿನ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ ಧರ್ಮಾಂದ, ಕನ್ನಡ ದ್ವೇಷಿ, ಬಲತ್ಕಾರದ ಮತಾಂತರಿ ಮತ್ತು ಸಾವಿರಾರು ಹಿಂದೂಗಳ ಹಾಗೂ ಕ್ರೈಸ್ತರ ಮಾರಣಹೋಮ ನಡೆಸಿದ ಮೈಸೂರು ಸಂಸ್ಥಾನದ ಮೇಲೆ ಅಧಿಕಾರ, ಹಣಕ್ಕಾಗಿ ದಾಳಿ ನಡೆಸಿದ ಟಿಪ್ಪುವಿನ ಸಂತತಿಯನ್ನು ವೈಭವಿಕರಿಸುವ ಟಿಪ್ಪು ಜಯಂತಿಯನ್ನು ಈಗಲಾದರೂ ಕೈಬಿಡಬೇಕೆಂದು ಆಗ್ರಹಿಸುತ್ತೇನೆ. ಕಳೆದ ವರ್ಷದ ಟಿಪ್ಪು ಜಯಂತಿಯ ಗಲಭೆಯಲ್ಲಿ ಮತಾಂಧರು ನಡೆಸಿದ ಕುಟ್ಟಪ್ಪನವರ ಹತ್ಯೆಯ ತನಿಖೆಯನ್ನೆ ಸರ್ಕಾರ ಸರಿಯಾಗಿ ನಿರ್ವಹಿಸಿಲ್ಲ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯ ಕುರಿತು ರಾಜ್ಯದ ಗೃಹ ಸಚಿವರು ನೀಡಿರುವ ಹೇಳಿಕೆ ಅತ್ಯಂತ ಬಾಲಿಶವಾಗಿದ್ದು, ಅವರ ಬೇಜವಬ್ದಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯ ತನಿಖೆಯಲ್ಲಿ ಸರ್ಕಾರವು ರಾಜ್ಯ ಪೊಲೀಸ್ ಇಲಾಖೆಯನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದು, ನಿಷ್ಪಕ್ಷ ಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುತ್ತದೆ ಎಂಬ ಭರವಸೆ ಖಂಡಿತವಾಗಿಯೂ ಇಲ್ಲ.
ಗೋಹತ್ಯೆ ಕಾನೂನನ್ನು ಹಿಂತೆಗೆದುಕೊಂಡು ಗೋವುಗಳ ಕಳ್ಳರಿಗೆ ಅನುಕೂಲ ಮಾಡಿಕೊಡುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡಲು ಸರ್ಕಾರವೇ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ತುಷ್ಠೀಕರಣ ನೀತಿಯನ್ನು ಖಂಡಿಸುತ್ತಾ, ಸರ್ಕಾರವು ಹಿಂದೂ ಸಂಘಟನೆಗಳ ಕಾರ್ಯಕರ್ತರ ದಮನ ನೀತಿಯನ್ನು ಬಿಟ್ಟು ರಾಜ್ಯದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುತ್ತೇನೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.