ಮಂಗಳೂರು : ಅಲ್ಪಸಂಖ್ಯಾತರನ್ನು ಓಲೈಸುವ ತುಷ್ಟೀಕರಣದ ರಾಜಕೀಯ ಕಾರಣಗಳಿಗೋಸ್ಕರ, ಇಸ್ಲಾಂ ಮತದ ಕುರಾನ್ನಲ್ಲಿ ಯಾವುದೇ ವ್ಯಕ್ತಿಯ ಜಯಂತಿಯನ್ನು ಆಚರಿಸುವುದು ನಿಷಿದ್ಧ ಆಗಿರುವುದಲ್ಲದೆ, ಈ ರಾಜ್ಯದ ಅಲ್ಪಸಂಖ್ಯಾತ ಬಂಧುಗಳು ಯಾವುದೇ ಮನವಿಯನ್ನು ಮತ್ತು ಬೇಡಿಕೆಯನ್ನು ಸರಕಾರಕ್ಕೆ ಅಥವಾ ಮುಖ್ಯಮಂತ್ರಿಗಳಲ್ಲಿ ಮಾಡಿಲ್ಲವಾದರೂ ಕೂಡ, ಸ್ವತಃ ಮುಖ್ಯಮಂತ್ರಿಗಳೇ ಸ್ವ-ಇಚ್ಛೆಯಿಂದ ಟಿಪ್ಪು ಜಯಂತಿಯನ್ನು ರಾಜಕೀಯ ಪ್ರೇರಿತವಾಗಿ ನವೆಂಬರ್ 10 ರಂದು ಈ ರಾಜ್ಯದಲ್ಲಿ ಸರಕಾರಿ ಕಾರ್ಯಕ್ರಮವಾಗಿ ನಡೆಸುವುದನ್ನು ಭಾರತೀಯ ಜನತಾ ಪಾರ್ಟಿ ಅತ್ಯಂತ ಖಂಡತುಂಡವಾಗಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ತಾ. 8-11-2016 ರಂದು ಬೆಳಿಗ್ಗೆ 10 ಕ್ಕೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ.
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅನೇಕ ಜನ ವಿರೋಧಿ ಆಡಳಿತ, ತುಷ್ಟೀಕರಣದ ರಾಜಕೀಯ, ಜನಪರ ಕಾಳಜಿಯೇ ಇಲ್ಲದ ಆಡಳಿತ ಮತ್ತು ರಾಜ್ಯದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವ ಷಡ್ಯಂತ್ರದ ಕಾರ್ಯ ಚಟುವಟಿಕೆಗಳಿಂದ ಜನ ರೋಸಿ ಹೋಗಿದ್ದಾರೆ.
ಅದರಲ್ಲೂ ಮುಖ್ಯವಾಗಿ 2015 ರ ನವೆಂಬರ್ 10 ರಂದು ರಾಜ್ಯದಲ್ಲಿ ಕೋಮು ಭಾವನೆಯನ್ನು ಹಾಳುಗೆಡವಿದ ಮತಾಂಧನಾದ ಟಿಪ್ಪುವಿನ ಜಯಂತಿಯನ್ನು ಸರಕಾರದ ಕಾರ್ಯಕ್ರಮವಾಗಿ ಆಚರಿಸಿರುವುದು ರಾಜ್ಯದಲ್ಲಿ ಹೊಸ ವಿವಾದವನ್ನು ಹುಟ್ಟು ಹಾಕಿದೆ ಮತ್ತು ಈ ವಿವಾದದಿಂದಾಗಿ ಮಂಗಳೂರು, ಮಡಿಕೇರಿ, ಬೆಂಗಳೂರು, ಶಿವಮೊಗ್ಗ ಮುಂತಾದ ನಗರಗಳಲ್ಲಿ ಕೋಮುಗಲಭೆಗಳು ಸೃಷ್ಟಿಯಾಗಿ ಅನೇಕ ಜನರ ಪ್ರಾಣ ಹಾಗೂ ಆಸ್ತಿ ಹಾನಿಯಾಗಿರುವುದು ದುಃಖಕರವಾಗಿದೆ.
ಪ್ರಜಾಪ್ರಭುತ್ವದ ದೇಶದಲ್ಲಿ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೇಸು ಸರಕಾರ ಯಾವುದೇ ಒಂದು ವಿವಾದಾತ್ಮಕ ವಿಚಾರಗಳು ಬಂದಾಗ ಮತ್ತು ಯಾವುದೇ ವಿಚಾರಗಳಿಗೆ ಪ್ರಜೆಗಳ ವಿರೋಧವಿದ್ದಾಗ ಅದನ್ನು ಬಲವಂತವಾಗಿ ಜಾರಿಗೆ ತರುವುದು ಜನವಿರೋಧಿ ಆಡಳಿತವಾಗುತ್ತದೆ.
ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಖಾಂತರ ಈ ಕಾರ್ಯಕ್ರಮದ ಸಾಧಕ ಬಾಧಕಗಳ ಬಗ್ಗೆ ವಿಚಾರಣೆ ನಡೆದು ಈ ವಿವಾದವನ್ನು ನವೆಂಬರ್ 8 ರೊಳಗೆ ಇತ್ಯರ್ಥಗೊಳಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕೆಂದು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.
ಒಬ್ಬ ರಾಜನಾಗಿದ್ದ ಟಿಪ್ಪುವಿನ ಜಯಂತಿಯನ್ನು ಸರಕಾರಿ ವೆಚ್ಚದಲ್ಲಿ ನಿರ್ವಹಿಸುವುದು ಕೂಡ ಸಂವಿಧಾನ ಬಾಹಿರವಾಗಿದೆ. ಟಿಪ್ಪು ಸುಲ್ತಾನ್ ಒಂದು ಸಣ್ಣ ಸಂಸ್ಥಾನದ ರಾಜನಾದ ಈತ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ, ಹೀಗಿದ್ದರೂ ಈತನ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಯಾವುದೇ ಶಾಂತಿಭಂಗ ಉಂಟಾದರೆ ಸರಕಾರವೇ ನೇರ ಹೊಣೆಯಾಗುತ್ತದೆ. ಎಂದು ಹೇಳಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆಚರಣೆಯ ತೀರ್ಮಾನವನ್ನು ಮತ್ತೆ ಸರಕಾರಕ್ಕೆ ಬಿಟ್ಟು ಕೊಟ್ಟಿದೆ.
ಆದ್ದರಿಂದ ಸರಕಾರದ ಮುಖ್ಯ ಕಾರ್ಯದರ್ಶಿಗಳು ಈ ಕಾರ್ಯಕ್ರಮದ ಆಗು ಹೋಗುಗಳ ಬಗ್ಗೆ ಸಮಗ್ರವಾಗಿ ವಿವರಗಳನ್ನು ಪಡೆದು ರಾಜ್ಯದಲ್ಲಿ ಯಾವುದೇ ರೀತಿಯ ಕೋಮು ಸೌಹಾರ್ದತೆ ಕದಡದಂತೆ ಜಾಗೃತೆ ವಹಿಸಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ನೆಲೆಸಲು ಅನುವು ಮಾಡಿ ಕೊಡುವುದಕ್ಕೋಸ್ಕರ ಈ ವಿವಾದಿತ ಕಾರ್ಯಕ್ರಮವನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸುತ್ತಾ, ಈಗಾಗಲೇ ವಿರೋಧ ವ್ಯಕ್ತ ಪಡಿಸಿದ ರಾಜ್ಯ ಭಾರತೀಯ ಜನತಾ ಪಾರ್ಟಿ ಪ್ರಮುಖರ ನಿರ್ಧಾರದಂತೆ ದಕ್ಷಿಣ ಕನ್ನಡ ಜಿಲ್ಲೆಯೂ ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ, ಎಂದು ಜಿಲ್ಲಾ ವಕ್ತಾರರಾದ ಜಿತೇಂದ್ರ ಎಸ್. ಕೊಟ್ಟಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.