‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದದಲ್ಲಿ ಉಪನ್ಯಾಸಕಾರರ ಅಭಿಮತ
ಮಂಗಳೂರು: ಸಂಘನಿಕೇತನದಲ್ಲಿ ಭಾನುವಾರ (ಸೆ. 18) ‘ಜಮ್ಮು ಕಾಶ್ಮೀರ – ಐತಿಹಾಸಿಕ ಸತ್ಯಗಳು ಮತ್ತು ವಾಸ್ತವದ ತಲ್ಲಣಗಳು’ ಸಂವಾದ ಕಾಶ್ಮೀರ ಕುರಿತ ಹಲವು ವಿಚಾರ, ವಿಮರ್ಶೆಗಳಿಗೆ ಕಾರಣವಾಯಿತು.
ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡರೆ ಭಾರತದ ಅಖಂಡತೆಯನ್ನು ದುರ್ಬಲಗೊಳಿಸಬಹುದು ಎಂಬ ತಂತ್ರವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಸಂವಾದಕಾರರ ಒಟ್ಟು ಅಭಿಮತ. ಈ ಬಗ್ಗೆ ಪ್ರಶ್ನೋತ್ತರಗಳೂ ನಡೆದವು.
ನಿಲುಮೆ ಬಳಗ, ಮಂಥನ ಸಹಯೋಗದೊಂದಿಗೆ ಏರ್ಪಡಿಸಿದ ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಜಮ್ಮು ಕಾಶ್ಮೀರ ಐತಿಹಾಸಿಕ ಸತ್ಯಗಳು ಮತ್ತು ಅಂತಾರಾಷ್ಟ್ರೀಯ ಆಯಾಮಗಳ ಕುರಿತು ಅಂಕಣಕಾರ ಪ್ರೊ.ಪ್ರೇಮಶೇಖರ ವಿಷಯ ಮಂಡಿಸಿದರು. ಕಾಶ್ಮೀರಿಗಳ ಜೊತೆ ಸೇನೆ ಸಂಬಂಧ ಮತ್ತು ಆಪರೇಶನ್ ಸದ್ಭಾವನೆ ಕುರಿತು ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ನಿಲುಮೆ ಬಳಗದ ರಾಕೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಂದೀಪ್ ಪ್ರಾಸ್ತಾವಿಕ ಮಾತನಾಡಿದರು.
ಕಾಶ್ಮೀರವಿಂದು ಪಾಕಿಸ್ತಾನಕ್ಕೆ ಬೇಡ. ಆದರೆ ವಿವಾದ ಜೀವಂತವಿರುವುದೇ ಅದಕ್ಕೆ ಅಗತ್ಯವಾಗಿರುವುದು ಎಂದು ಪ್ರೇಮಶೇಖರ ಹೇಳಿದರು. ಜಮ್ಮುವಿನಲ್ಲಿ ಗರಿಷ್ಠ ಹಿಂದುಗಳಿದ್ದಾರೆ, ಲಡಾಖ್ ನಲ್ಲಿ ಬೌದ್ಧರು. ಹೀಗಿರುವಾಗ ಕಾಶ್ಮೀರ ಹೇಗೆ ಪಾಕಿಸ್ತಾನಕ್ಕೆ ಸೇರ್ಪಡೆಗೊಳ್ಳಲು ಸಾಧ್ಯ, ಸದ್ಯ ಕಾಶ್ಮೀರ ಕಣಿವೆಯಲ್ಲಷ್ಟೇ ಪಾಕ್ ಪ್ರೇರಿತ ಭೀತಿವಾದಿಗಳಿದ್ದಾರೆ ಎಂದು ಹೇಳಿದ ಪ್ರೇಮಶೇಖರ, ಇಡೀ ಸಮಸ್ಯೆ ಕುರಿತು ಎಳೆಎಳೆಯಾಗಿ ವಿಶ್ಲೇಷಿಸಿದರು. ಉಗ್ರಗಾಮಿ ಪೋಷಕರ ಮಕ್ಕಳು ಐಟಿ ಕ್ಷೇತ್ರದಲ್ಲಿದ್ದಾರೆ. ಅದೇ ಉಗ್ರರು ಮಕ್ಕಳನ್ನು ಭೀತಿವಾದ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದರು ಪ್ರೊ. ಪ್ರೇಮಶೇಖರ.
ಭಾರತವಿಂದು ಒಳಗಿನ ಭಯೋತ್ಪಾದಕರನ್ನು ಮಟ್ಟಹಾಕಬೇಕಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಸಮಸ್ಯೆ ಕಾಶ್ಮೀರದಲ್ಲಿ ನಡೆಯುತ್ತಿರುವ ಆಪರೇಶನ್ ಸದ್ಭಾವನಾ ಸಮಸ್ಯೆ ಪರಿಹಾರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಹೃದಯ ಸಂಬಂಧ ಇಂದು ಕಾಶ್ಮೀರಿಗಳಿಗೆ ಭಾರತದ ಇತರ ಭಾಗಗಳಿಂದ ಗಟ್ಟಿಕೊಳ್ಳುವ ಪ್ರಕ್ರಿಯೆ ನಡೆಯಬೇಕು. ಆರೆಸ್ಸೆಸ್ ನ ಸೇವಾಭಾರತಿ ಸಹಿತ ವಿವಿಧ ಸಂಘಟನೆಗಳು ಸೇನೆಯ ಕಾರ್ಯಕ್ಕೆ ಕೈಜೋಡಿಸಿದೆ. ಮಕ್ಕಳಿಗೆ ಕಲ್ಲೆಸೆಯಬಾರದು, ಸಾಕ್ಷರರಾಗಿ ಎಂಬ ಸಂದೇಶವನನ್ನು ಸೇನೆ ನೀಡುತ್ತಿದೆ ಎಂದು ಚಕ್ರವರ್ತಿ ಸ್ವಾನುಭವವನ್ನೂ ವಿವರಿಸಿದರು.
ಇಂದು ನಡೆಯುತ್ತಿರುವ ಪಾಕ್ ಪ್ರಾಯೋಜಿತ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕಾರ್ಯ ಮೋದಿ ಸರ್ಕಾರದಿಂದ ನಡೆಯುತ್ತಿದೆ. ಇದು ಯಶಸ್ವಿಯಾದರೆ ಪಾಕ್ ಪ್ರಯತ್ನಗಳೆಲ್ಲವೂ ದುರ್ಬಲವಾಗುವುದರಲ್ಲಿ ಸಂಶಯವಿಲ್ಲ ಎಂದು ಸೂಲಿಬೆಲೆ ಹೇಳಿದರು.
ವೀರಯೋಧನಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಯೋಧ ಶಂಕರ ಸಫಲ್ಯ ಅವರನ್ನು ಸನ್ಮಾನಿಸಲಾಯಿತು. ಸೇನಾ ಕಾರ್ಯಾಚರಣೆ ವೇಳೆ ಮುಂಚೂಣಿಯಲ್ಲಿದ್ದು, ಉಗ್ರಗಾಮಿಗಳನ್ನು ಸದೆಬಡಿದ ತಂಡದಲ್ಲಿ ಶಂಕರ ಸಫಲ್ಯ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.