ನವದೆಹಲಿ : ಕಾಶ್ಮೀರದಲ್ಲಿ ಪ್ರಚೋದನಾಕಾರಿ ಕೃತ್ಯಗಳಿಗೆ, ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ.
ಶನಿವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ಥಾನ ಬಹಿರಂಗವಾಗಿಯೇ ಕಾಶ್ಮೀರದಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದೆ ಮತ್ತು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದಿದ್ದಾರೆ.
ನಮ್ಮೆಲ್ಲರ ಮೋದಿಯೂ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಾಳಜಿಯನ್ನು ಹೊಂದಿದ್ದಾರೆ ಎಂದಿರುವ ಅವರು ೨೦೦೮ ರ ಬಳಿಕ ಕಣಿವೆ ಪರಿಸ್ಥಿತಿ ಕೆಟ್ಟದಾಗಿದೆ ಎಂದಿದ್ದಾರೆ.
2008 ರ ಅಸ್ಥಿರತೆಯ ಬಳಿಕ ಯುಪಿಎ ಕಾಶ್ಮೀರದ ಪರಿಸ್ಥಿತಿಯನ್ನು ನಿರ್ಲಕ್ಷಿಸಿತ್ತು. ಆದರೆ ಇಂದು ಮೋದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಬಹಳಷ್ಟು ಪರಿಶ್ರಮ ಪಡುತ್ತಿದ್ದಾರೆ ಎಂದಿದ್ದಾರೆ.
ಪಾಕಿಸ್ಥಾನವನ್ನು ತಲುಪುವ ಸಲುವಾಗಿ ಮೋದಿ ಲಾಹೋರ್ಗೆ ತೆರಳಿದರು. ಆ ಬಳಿಕ ಪಠಾಣ್ಕೋಟ್ ಘಟನೆ ನಡೆಯಿತು. ಗೃಹಸಚಿವ ರಾಜ್ನಾಥ್ ಸಿಂಗ್ ಅವರು ಇಸ್ಲಾಮಾಬಾದ್ಗೆ ತೆರಳಿದರು. ದುರಾದೃಷ್ಟಕರವೆಂದರೆ ಪಾಕಿಸ್ಥಾನ ಮಾತುಕತೆ ನಡೆಸುವ ಮತ್ತು ಕಾಶ್ಮೀರ ಹಿಂಸೆಯನ್ನು ಇತ್ಯರ್ಥಗೊಳಿಸುವ ಅವಕಾಶವನ್ನು ಪದೇ ಪದೇ ಕೈ ಚೆಲ್ಲುತ್ತಲೇ ಬಂತು ಎಂದಿದ್ದಾರೆ. ಅಲ್ಲದೆ ಪ್ರತ್ಯೇಕತಾವಾದಿಗಳು ಮುಂದೆ ಬಂದು ಕಾಶ್ಮೀರದ ಮುಗ್ಧ ಯುವಕರನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದಿದ್ದಾರೆ.
ಮಕ್ಕಳಿಗೆ ಹೊರ ಹೋಗಿ ಪೊಲೀಸ್ ಸ್ಟೇಷನ್ಗೆ ಕಲ್ಲು ಹೊಡೆಯಿರಿ ಎಂದು ಹೇಳುವುದನ್ನು ನೋಡಲು ಒಬ್ಬಳು ತಾಯಿಯಾಗಿ ನನಗೆ ತೀವ್ರ ನೋವಾಗುತ್ತದೆ. ಕಲ್ಲು ಹೊಡೆಯುವುದರಿಂದ ಸಮಸ್ಯೆ ಇತ್ಯರ್ಥವಾಗಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಜುಲೈ 8 ರಂದು ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆ ನಡೆದ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆ ಬಳಿಕ ಮೋದಿ ಮತ್ತು ಮುಫ್ತಿ ನಡುವೆ ನಡೆದ ಮೊದಲ ಮಹತ್ವದ ಸಭೆ ಇದಾಗಿದೆ.
ಉಭಯ ನಾಯಕರು ಹಿಂಸೆ ಮತ್ತು ಅದನ್ನು ಹತ್ತಿಕ್ಕುವ ಬಗೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.