ಮಂಗಳೂರು : ಒಂದು ಭಾಷೆಯನ್ನು ಉಳಿಸಿದಾಗ ಅದರ ಸಂಸ್ಕೃತಿ, ಜೀವನ ಶೈಲಿ ಹಲವಾರು ಕಸುಬುಗಳನ್ನು ಉಳಿಸಿದಂತಾಗುತ್ತದೆ. ಕೊಂಕಣಿಯಂತಹ ಭಾಷೆ ಅನ್ಯ ಭಾಷಿಗರು ಮಾನ್ಯತೆ ಕೊಟ್ಟು ಕಲಿತರೆ ಉಳಿಸಿದಂತಾಗುತ್ತದೆ ಪ್ರತಿ ಕೊಂಕಣಿ ಮನೆ ಕೊಂಕಣಿ ಮಾತನಾಡುವ ಮಕ್ಕಳನ್ನು ಬೆಳೆಸುವುದಲ್ಲದೆ ಸುತ್ತಮುತ್ತಲಿನ ಪರಿಸರದವರಿಗೆ ಕೊಂಕಣಿ ಕಲಿಯಲು ಸ್ಫೂರ್ತಿ ನೀಡಬೇಕು ಎಂದು ಮಂಗಳೂರು ದಕ್ಷಿಣ ವಿಭಾಗದ ವಿಧಾನ ಸಭಾ ಸದಸ್ಯರಾದ ಶ್ರೀ ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು.
ಯುನೊಸ್ಕೂ ವರದಿ ಪ್ರಕಾರ ಪ್ರತಿ 14 ದಿನಕ್ಕೆ ಒಂದು ಭಾಷೆ ಅಳಿಯುತ್ತಿದೆ. ಸಸ್ತನಿಗಳು ಹಾಗೂ ಪಕ್ಷಿಗಳು ಅಳಿಯುವುದಕ್ಕಿಂತ ವೇಗವಾಗಿ ಭಾಷೆಗಳು ಇಲ್ಲವಾಗುತ್ತಿವೆ. ಇದೇ ವೇಗದಲ್ಲಿ ಭಾಷೆಗಳು ನಶಿದರೆ 2100 ಹೊತ್ತಿಗೆ 7000 ಭಾಷೆಗಳು ಇಲ್ಲವಾಗಬಹುದು ಎಂದು ತಿಳಿಸಿದರು. ಅವರು ಬೆಸೆಂಟ್ ಸಂಧ್ಯಾಕಾಲೇಜು ಹಾಗೂ ಬೆಸೆಂಟ್ ಮಹಿಳಾ ಕಾಲೇಜು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ, ಆಯೋಜಿಸಿದ ಕರಾವಳಿ ಕೊಂಕಣಿ ಭಾಷಿಗರು ಹಾಗೂ ಅವರ ಆಂಗ್ಲೋ-ಪೋರ್ಚುಗೀಸ್ ಸಂಬಂಧ ಎಂಬ ವಿಷಯದ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಸ್ಟ್ರೇಲಿಯಾ, ಪ್ಯಾಲೆಸ್ತೀನ್ ಮತ್ತು ಇಂಗ್ಲೆಂಡಗಳಲ್ಲಿ ನಶಿಸಿ ಹೋಗುತ್ತಿರುವ ಭಾಷೆಗಳನ್ನು ಸರಕಾರ ಮುತುವರ್ಜಿಯಿಂದ ಸಂರಕ್ಷಿಸುವ ಕೆಲಸ ಮಾಡುತ್ತಿದೆ. ಭಾಷೆಯೊಂದು ನಶಿಸಿದಾಗ ಅದರ ಸಾಹಿತ್ಯದಲ್ಲಿ ಹುದುಗಿರುವ ಅದ್ಭುತ ವಿಚಾರಗಳು ಸಾಂಪ್ರದಾಯಿಕ ಜ್ಞಾನ ನಶಿಸುತ್ತದೆ. ಸಂಸ್ಕೃತದಂತಹ ಭಾಷೆಗಳನ್ನು ನಾವು ಅಧ್ಯಯನ ಮಾಡದಿದ್ದರೆ ಅಪೂರ್ವ ಜ್ಞಾನ ಸಂಪತ್ತನ್ನು ಓದಿ ಅರಿತುಕೊಳ್ಳುವವರು ಇಲ್ಲವಾಗಬಹುದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲಿದ್ದ ಬಸ್ತಿ ವಾಮನ ಶೆಣ್ಯೆ, ಅಧ್ಯಕ್ಷರು, ವಿಶ್ವಕೊಂಕಣಿ ಕೇಂದ್ರ, ಶಕ್ತಿನಗರ, ಅವರು ಮಾತನಾಡುತ್ತಾ ದೇಶದ ಎಲ್ಲೆಡೆಗಳಲ್ಲಿ ಕೊಂಕಣಿಗರು ಸಂಚರಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಂದ ಸಾಂಸ್ಕೃತಿಕ ವಿಚಾರಗಳನ್ನು ಹಾಗೂ ಶಬ್ದಗಳನ್ನು ಎರವಲು ಪಡೆದಿದ್ದಾರೆ. ಗೋವಾದಲ್ಲಿ ಕೊಂಕಣಿಗರು ನೆಲೆಸಿದ್ದು ಒಂದು ಚರಿತ್ರೆಯ ದೊಡ್ಡ ಅಧ್ಯಾಯ. ಪೋರ್ಚುಗೀಸರಿಂದ ನಡೆದ ಧರ್ಮ, ಭಾಷೆ, ಸಂಸ್ಕೃತಿಗಳ ಮೇಲಿನ ಅತ್ಯಾಚಾರದಿಂದ ತುಳುನಾಡಿಗೆ ವಲಸೆ ಬಂದ ಕೊಂಕಣಿಗರಿಗೆ ಇಲ್ಲಿಯ ಜನತೆ ಬಹಳಷ್ಟು ಸಹಕಾರ ಪ್ರೀತಿ ತೋರಿಸಿದ್ದಾರೆ. ಇದಕ್ಕೆ ಕೊಂಕಣಿಗರು ಚಿರಋಣಿ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯಅಕಾಡೆಮಿಯ ಅಧ್ಯಕ್ಷರಾದ ರಾಯ್ ಕಾಸ್ಟಾಲಿನೋ ಮಾತನಾಡುತ್ತಾ ಈ ವರ್ಷ ಕೊಂಕಣಿ ಭಾಷೆ ನಮ್ಮ ಸಂವಿಧಾನ ೮ನೇ ಪರಿಚ್ಛೇದಕ್ಕೆ ಸೇರಿದ ಬೆಳ್ಳಿ ಹಬ್ಬ ಆಚರಿಸಿದ್ದೇವೆ. ಆದರೆ ಕೊಂಕಣಿ ಭಾಷೆ 25 ವರ್ಷ ಹಳೆಯದಲ್ಲ ಅದು 8000 ವರ್ಷ ಹಳೆಯದು. ಸರಸ್ವತಿ ನದಿ ತೀರದಿಂದ ವಲಸೆ ಬಂದ ಕೊಂಕಣಿಗರು ಸ್ವಾಭಿಮಾನಿಗಳು ಹಾಗೂ ದೇಶಕ್ಕೆ ವಿವಿಧ ಕ್ಷೇತ್ರಗಳ ಮೂಲಕ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.
ವಿಚಾರ ಸಂಕಿರಣದ ವಿಷಯವನ್ನು ಪರಿಚಯಿಸಿದ ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸತೀಶ್ಕುಮಾರ್ ಶೆಟ್ಟಿ ಮಾತನಾಡುತ್ತಾ ಅಪೂರ್ವ ಇತಿಹಾಸವನ್ನು ಹೊಂದಿದ್ದ ಕೊಂಕಣಿ ಜನರ ಜೀವನ, ಆಚರಣೆಗಳು ಮತ್ತು ಸಂಸ್ಕೃತಿ ಇವುಗಳನ್ನು ಅನ್ಯರಿಗೆ ಪರಿಚಯಿಸುವ ಹಾಗೂ ಸಂಶೋಧನೆಗಳು ಆಗಬೇಕಾಗಿರುವ ಕ್ಷೇತ್ರಗಳ ಬಗ್ಗೆ ಪರಿಶೀಲನೆ ಮಾಡುವ ಉದ್ದೇಶದಿಂದ ಸದರಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಾಗತ ಭಾಷಣ ಮಾಡಿದ ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾರ್ಮಲಿಟಾ ಗೋವಿಯಸ್, ಬಹಳ ಪ್ರಯತ್ನದ ನಂತರ ಕೊಂಕಣಿ ಇತಿಹಾಸದಲ್ಲಿ ಮೊದಲ ಬಾರಿಗೆ ಕೊಂಕಣಿಯ ಅಧ್ಯಯನ ಯೋಗ್ಯ ವಿಚಾರಗಳ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು ಇದು ಇತಿಹಾಸ ಸೃಷ್ಟಿಸಲಿದೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಡಬ್ಲೂಇಎನ್ಎಸ್ ಕುಡ್ಪಿ ಜಗದೀಶ್ ಶೆಣೈ ಮಾತನಾಡುತ್ತಾ ಬೆಸೆಂಟ್ ಕಾಲೇಜು ಈ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಬಹಳ ಹೆಮ್ಮೆ ಪಡುತ್ತಿದೆ ಎಂದರು. ಭಾಗವಹಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಡಾ. ಜಯವಂತ ನಾಯಕ್, ಸಂಯೋಜಕರು ಕೊಂಕಣಿ ಅಧ್ಯಯನ ಪೀಠ, ಕೆ.ದೇವಾನಂದ ಪೈ, ಸಂಚಾಲಕರು ಬೆಸೆಂಟ್ ಮಹಿಳಾ ಕಾಲೇಜು, ಡಾ.ಅಲನ್ ಮಚಾದೋ, ಲೇಖಕರು ಹಾಗೂ ಸಂಶೋಧಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪರಿಣತರಾದ ಅಲನ್ ಮಚಾದೋ, ಶಕುಂತಳ ಕಿಣಿ, ಎಡ್ಡಿ ಸಿಕ್ವೇರ, ಡಾ.ಜಯವಂತ ನಾಯಕ್, ಇವರು ವಿವಿಧ ವಿಷಯಗಳ ಮಂಡನೆ ಮಾಡಿದರು. ಸಂಜೆ ಸಿದ್ದಿ ಹಾಗೂ ಕುಡುಬಿ ಸಮುದಾಯವರಿಂದ ’ನಾಚ್ ಸೋಬಾಣ್’ ನಡೆಯಿತು. ಎರಡು ದಿನಗಳಲ್ಲಿ 40 ವಿವಿಧ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಆಗಲಿರುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.