ನವದೆಹಲಿ: 70 ನೇ ಸ್ವಾತಂತ್ರ್ಯೊತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ತೆರಳಿ ಅಲ್ಲಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ. ದೇಶದ ಎಲ್ಲಾ ಜನರ ಪರವಾಗಿ ಯೋಧರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಅವರು ಯೋಧರಿಗೆ ರಾಖಿ ಕಟ್ಟಲಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಒಂದು ಭಾಗವಾದ ಯೋಧರಿಗೆ ಸಲಾಂ ಎನ್ನುವ ಕಾರ್ಯಕ್ರಮದಲ್ಲಿ ಗಡಿಕಾಯುವ ಯೋಧರಿಗೆ ಕೃತಜ್ಞತೆ ಸಲ್ಲಿಸಲು, ದೇಶದಾದ್ಯಂತ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಈ ಸಂದರ್ಭ ಜನರು ಯೋಧರಿಗೆ ಕೃತಜ್ಞತಾ ಪತ್ರವನ್ನು ಬರೆದು ಕೊಡಲಿದ್ದಾರೆ.
ಕೇಂದ್ರ ಜವಳಿ ಇಲಾಖೆಯು 70 ಪ್ರದೇಶಗಳನ್ನು ಈ ಕಾರ್ಯಕ್ರಮಕ್ಕಾಗಿ ಗುರುತಿಸಿದ್ದು, ಕೇಂದ್ರದ ಹಲವು ಸಚಿವರು ಗಡಿ ಪ್ರದೇಶಗಳಿಗೆ ತೆರಳಿ ಯೋಧರೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ.
1984 ರಲ್ಲಿ ಸಿಯಾಚಿನ್ ಸೇನೆ ಮೇಘದೂತ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಈವರೆಗೆ ಸಿಯಾಚಿನ್ ಪ್ರದೇಶಕ್ಕೆ ಯಾವ ಕೇಂದ್ರ ಸಚಿವೆಯೂ ಭೇಟಿ ನೀಡಿಲ್ಲ. ಹೀಗಾಗಿ ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಸಿಯಾಚಿನ್ಗೆ ಭೇಟಿ ನೀಡಲಿರುವ ಸ್ಮೃತಿ ಇರಾನಿಯವರು ಮೊದಲ ಸಚಿವೆ ಎನ್ನಿಸಿಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.