ನರ ಮಾಂಸ ಮೂಲೆಗಳಿಂದ ನಿರ್ಮಿತವಾಗಿರುವ ಈ ದೇಹ ಮಣ್ಣ ಸೇರುವ ಮುನ್ನ ಇರುವ ಕಾಲವೆ ಬದುಕು ಅದೇ ಜೀವನ. ಇದರ ನಡುವಲ್ಲೆ ನಡೆಯುವು ಅದೇ “ಕರ್ಮಸಾಧನೆ” ಜೊತೆಯಲ್ಲಿ ಪಾಪ ಪುಣ್ಯದ ಲೆಕ್ಕಾಚಾರವೊಂದಷ್ಟು. ಸಾಕಿ ಸಲುಹಿದ ಈ ದೇಹ ಕಡೆಗೊಮ್ಮೆ ಮಣ್ಣಾದರೂ ಅವಿನಾಶಿಯಾಗಿ ಉಳಿಯುವುದು ಮಾತ್ರ ಸತ್ಕರ್ಮಗಳಷ್ಟೆ. ಮಾನವ ಎಷ್ಟೇ ತಂತ್ರಜ್ಞಾನಿಯಾದರೂ ಆತನೆಂದಿಗೂ ಪರಾವಲಂಬಿ ಎಂಬುದು ಮಾತ್ರ ಸತ್ಯ. ಜಾಗತಿಕ ಯುಗದ ಸಂಘಜೀವಿ ಮಾನವನ ಅಸಂಘಟಿತ ಕಥೆ ಇದು.
ತನ್ನ ಬಾಳ್ವೆಪಯಣ ರಥದ ‘ಸ್ವಾ’ ಕಾರ್ಯದಲ್ಲಿ ಚಲಿಸುತ್ತಿದ್ದ ಮನುಷ್ಯನ ಹೊಸ ಸಾಂಘಿಕ ಚಿಂತನೆಗೆ ನಾಂದಿ ಹಾಡುವಲ್ಲಿ ಸಾಮಾಜಿಕ ಜಾಲತಾಣ ಒಂದು ಮಹತ್ತರ ಪಾತ್ರ ವಹಿಸುತ್ತದೆ. ಆದರೆ ಮುಂದೆ ಅನೇಕ ಕುಕ್ಯಾತಿಗೂ ಧ್ವನಿಗೂಡಿಸಿದ್ದು ಇದೇ ಜಾಗತಿಕ ಮಾಧ್ಯಮ ವೇದಿಕೆ. ಆಸ್ಥಿಕರು ಭಕ್ತಿಯಿಂದ ನೆಟ್ಟ ಅಶ್ವತ್ಥ ಗಿಡದ ಮೇಲೆ ಅಳಿಲು-ಪಕ್ಷಿಗಳು ಗೂಡ ಕಟ್ಟಿ ಸ್ಥಾಳಾಶುದ್ದಿ ನಡೆಸುದು ಅಸಹಜವೆ ಹೇಳಿ? ಹಾಗೆಯೇ ಮನುಷ್ಯಸೃಷ್ಟಿಯ ಇಲ್ಲೂ ಒಂದಷ್ಟು ದಂಧೆಗಳು ಸಾಗುತ್ತಲೇ ಇವೇ.
ಆದರೆ ಇವುಗಳೆಲ್ಲದರ ನಡುವೆ ಕಪ್ಪಿಚಿಪ್ಪಿನೊಳಗೆ ಮುತ್ತಿನ ಮಣಿಯೊಂದು ಹುಟ್ಟುವಂತೆ ಅಗಾಧ ಕನಸುಗಳನ್ನು ಹೊತ್ತು, ಭವಿಷ್ಯದ ನವರಾಷ್ಟ್ರ ನಿರ್ಮಾಣದ ಚಿಂತನೆಯನ್ನು ಇಟ್ಟುಕೊಂಡು, ಯುವಜನತೆಯ ಸ್ಫೂರ್ತಿಯ ಚಿಲುವೆ ಶ್ರೀ ವಿವೇಕಾನಂದರ ಕರೆಯ ಧ್ವನಿಯಾಗಿ ಜನ್ಮತಳೆದ ಸಂಸ್ಥೆಯೇ “ಅಮೃತಸಂಜೀವಿನಿ”. ಹೌದು ಕಳೆದ 2015ರ ಆಗಸ್ಟ್ 2 ರಂದು ಸಮಾಜಕಾರ್ಯ ದೃಷ್ಟಿಯಲ್ಲಿ ಅಮೃತಸಂಜೀವಿನಿ ಎಂಬ ಸಂಸ್ಥೆಯೊಂದು 17 ಜನರ ಸಮ್ಮುಖದಲ್ಲಿ ಜನ್ಮ ತಳೆದುಕೊಂಡಿತು. ಆ ದಿನ ತರುಣ ಪಡೆ ಕಂಡ ಕನಸೊಂದು ಸಾಕ್ಷಾತ್ಕಾರವಾದ ಸುದಿನ ನಮ್ಮೆಲ್ಲರಿಗೂ.
ಸಮಾಜಮುಖಿ ಕಾರ್ಯದ ಚಿಂತನೆಯನ್ನಿಟ್ಟುಕೊಂಡು, ಭವಿಷ್ಯದ ನವ ಜಾಗೃತ ಸಮಾಜದ ಕಲ್ಪನೆಯನ್ನು ಕಟ್ಟಿಕೊಂಡ ತರುಣ ಪಡೆಯೊಂದು “ಅಮೃತಸಂಜೀವಿನಿ” ಎಂಬ ವೇದಿಕೆಯೊಂದನ್ನು ಕಟ್ಟಿಕೊಂಡಿತು. ಈ ವೇದಿಕೆಯ ಮೇಲೊಂದು ಗಟ್ಟಿಯಾದ ಮಂಟಪವ ಕಟ್ಟಬೇಕಾದರೆ ಅದಕ್ಕೆ ನೂರಾರು ಹಸ್ತಗಳ ಸಹಕಾರ ಅಗತ್ಯವಾಗಿತ್ತು. ‘ಬದಲಾವಣೆಯನ್ನು ಬಯಸುವವನು ಮೊದಲು ತನ್ನಿಂದ ಬದಲಾವಣೆಗೆ ನಾಂದಿಹಾಡಬೇಕು’ ಎಂಬಂತೆ ಪ್ರಾಥಮಿಕ ಹಂತದಲ್ಲಿ ಸಂಸ್ಥೆಯು ಕರಾವಳಿಯನ್ನು ತನ್ನ ಕಾರ್ಯ ಕ್ಷೇತ್ರವಾಗಿ ಕೈಗೆತ್ತಿಕೊಂಡಿತು. ತಿಂಗಳಿಗೆ ಒಂದು ಅಶಕ್ತ ಕುಟುಂಬವನ್ನು ಯೋಜನೆಯನ್ನಾಗಿ ತೆಗೆದುಕೊಂಡು, ಅದಕ್ಕಾಗಿ ಧನ ಸಂಗ್ರಹಿಸಿ ತಿಂಗಳ ಕೊನೆಗೆ ಆ ಕುಟುಂಬಕ್ಕೆ ತಲುಪಿಸುವುದೆಂದು ತೀರ್ಮಾನಿಸಲಾಯಿತು. ಇದಕ್ಕಾಗಿ ಮಾಸಾಂತ್ಯದಲ್ಲಿ ಸಂಸ್ಥೆಯ ಸದಸ್ಯರು ತಮ್ಮ ದುಡಿಮೆಯಲ್ಲಿ ಒಂದಿಷ್ಟು ಮೊತ್ತವನ್ನು ಸಂಸ್ಥೆಗಾಗಿ ನೀಡುವುದು ಮಾತ್ರವಲ್ಲದೆ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣವನ್ನು ಪ್ರಧಾನ ಮಾಧ್ಯಮವಾಗಿ ಬಳಸಿಕೊಳ್ಳಲಾಯಿತು. ಹಾಗು ಪ್ರಾದೇಶಿಕವಾಗಿ ಕಾರ್ಯನಿರ್ವಹಿಸುತ್ತಿರುವ ತರುಣ ತಂಡಗಳನ್ನು ಅಮೃತಸಂಜೀವಿನಿಯ ಸಂಕಲ್ಪದೊಂದಿಗೆ ಜೊತೆಗೂಡಿಸುವುದು ನಮ್ಮ ಯೋಜನೆಯಾಗಿತ್ತು.
ಹೀಗೆ ಪ್ರಧಾನವಾಗಿ ಈ ಮಾಸಿಕ ಯೋಜನೆಯನ್ನೂ ಅದರ ಜೊತೆಯಲ್ಲಿ “ತುರ್ತುಸಂಧರ್ಭ ಯೋಜನೆ” ಮತ್ತು “ಕರಸೇವೆ” “ಪರಿಸರ ದಿನ”, ” ಮಾದಕದ್ರವ್ಯ” ವಿರೋಧಿ ದಿನ”, “ರಕ್ತದಾನ ಶಿಬಿರ” ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಈ ಒಂದು ವರ್ಷದಲ್ಲಿ ಸಂಸ್ಥೆಯು ಪೂರೈಸಿದೆ. ಕರಾವಳಿಯಲ್ಲಿ ಈ ರೀತಿಯ ಸಮಾಜ ಜಾಲತಾಣಾಧಾರಿತ 25 ಮಿಕ್ಕ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದರೂ ಅವೆಲ್ಲದರ ನಡುವೆ “ಅಮೃತಸಂಜೀವಿನಿಯು” ತನ್ನದೇ ಆದ ವಿಭಿನ್ನವಾದ ಮೈಲಿಗಲ್ಲನ್ನು ಹಾಕಿಕೊಂಡಿದೆ ಎನ್ನುದಕ್ಕೆ ನಿಜಕ್ಕೂ ಹರ್ಷದಾಯಕ.
ತನ್ನ ಒಂದು ವರ್ಷದಲ್ಲಿ 2000 ಹೆಚ್ಚು ಜನರನ್ನು ತಲುಪಿರುವ ಸಂಸ್ಥೆ ಪ್ರತ್ಯಕ್ಷವಾಗಿ 1000+ ಜನರ ಸಹಾಯಹಸ್ತವನ್ನು ತನ್ನ ಯೋಜನೆಯಲ್ಲಿ ಪಡಕೊಂಡಿದೆ. ಈ 12 ತಿಂಗಳಲ್ಲಿ 11 ಯೋಜನೆಗಳನ್ನು ಪೂರ್ಣಗೊಳಿಸಿದೆ, ಪ್ರಸ್ತುತ 12ನೇ ಯೋಜನೆಯ ತಯಾರಿಯಲ್ಲಿದೆ. ಈ ಒಂದು ವರ್ಷದಲ್ಲಿ ಸಂಸ್ಥೆಯು 11 ಮಾಸಿಕ ಯೋಜನೆಗಳನ್ನು 10 ತುರ್ತು ಸಂದರ್ಭ ಯೋಜನೆಗಳನ್ನು ನೆರವೇರಿಸಿಕೊಂಡಿದೆ ಇದರ ಜೊತೆಯಲ್ಲಿ 20ಕ್ಕೂ ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಸಂಘಟಿಸಿ ಯಶಸ್ವಿಗೊಳಿಸಿದೆ. ಇದು ಒಂದು ಉತ್ತಮ ಧ್ಯೇಯವನ್ನಿಟ್ಟುಕೊಂಡು ಮುಂದಾದವರಿಗೆ ಸಮಾಜ ತೋರಿದ ಬೆಂಬಲ ಹಾಗು ಸಶಕ್ತ ಸಮಾಜದ ಕಲ್ಪನೆಯ ಕಟ್ಟಿದ ತರುಣ ಸಾಮಾಜಿಕ ಪರಿಶ್ರಮದ ಫಲ.
ಕೇವಲ ಯೋಜನೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ಸಹ ಮನಸ್ಸಿನ ಸಮಾಜಬಾಂಧವರು ಸಂಸ್ಥೆಯ ಯೋಜನೆಗಾಗಿ 800000+ ಆರ್ಥಿಕ ವ್ಯವಸ್ಥೆಯನ್ನು ಒಟ್ಟುಗೂಡಿಸುವಲ್ಲಿ ಸಹಕಾರಿಯಾಗಿದ್ದಾರೆ ಇದು ಸಂಸ್ಥೆಯ ಮೇಲೆ ಜನರಿಟ್ಟ ನಂಬಿಕೆಯ ಪ್ರತೀಕವಾಗಿದೆ. ಅಮೃತಸಂಜೀವಿನಿಯು ಕೇವಲ ಈ ತಾತ್ಕಾಲಿಕ ಯೋಜನೆಗಳಿಗೆ ಮೀಸಲಾಗದೆ ಭವಿಷ್ಯದಲ್ಲಿ ಶೈಕ್ಷಣಿಕ, ತುರ್ತುಚಿಕಿತ್ಸಾ, Blood bank, Research Center, Training Centers ಮುಂತಾದ ಯೋಜನೆಗಳ ಕಲ್ಪನೆಯನ್ನಿಟ್ಟುಕೊಂಡು ಸಮಾಜದ ಸಹಕಾರದೊಂದಿಗೆ ಅದನ್ನು ನೆರವೇರಿಸುವ ಆಶಯವನ್ನು ಹೊಂದಿದೆ. ಅದರ ಪೂರ್ವತಯಾರಿಯಾಗಿ “ಅಮೃತರಕ್ತನಿಧಿ”, “Amsa Youth Chamber”, ” Amsa Voice of Woman’s”, ಎಂಬ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ.
ಈ ರೀತಿಯಾಗಿ ಅಮೃತಸಂಜೀವಿನಿಯು ಮಾನವೀಯತೆಯ ನೆಲೆಯಲ್ಲಿ ಹನಿನೀರು ಚಿಮ್ಮುವ ರಸಕಾರಂಜಿಯಾಗಿ ಗುರುವರ್ಯರಾದ ಶ್ರೀ ಶ್ರೀ ಶ್ರೀ ರಾಜಶೇಖರನಂದ ಸ್ವಾಮಿಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಒಂದು ಸಂಘಟಿತ ಶಕ್ತಿಯಾಗಿ ಮುನ್ನುಗ್ಗುತ್ತಿದೆ. ನವ್ಯಭಾರತದ ನಿರ್ಮಾಣಕ್ಕಾಗಿ ಮಾನವೀಯತೆ, ಸೋದರತೆ, ಸಾಮಾಜಿಕ ಕಳಕಳಿ, ಭ್ರಾತೃತ್ವದ ನೆಲೆಗಟ್ಟಿನಲಿ ಸಾಗುತ್ತಿದೆ. ನಮ್ಮ ಮುಂದಿನ ಯೋಜನೆಗಳು ಪರಿಪೂರ್ಣಗೊಳ್ಳಲು ಈ ಸಶಕ್ತ ಸಮಾಜದ ಸಹಕಾರ ಅತ್ಯಗತ್ಯವಾಗಿದೆ.
ಮೊದಲೇ ಹೇಳಿದಂತೆ ಮಾನವನು ಪರಾವಲಂಬಿ ಜೀವಿ. ನಮ್ಮ ಈ ಋಣವನ್ನು ತೀರಿಸುವುದಕ್ಕೆ ಅಮೃತಸಂಜೀವಿನಿ ಎಂಬ ವೇದಿಕೆಯೊಂದು ನಿಮ್ಮ ಮುಂದಿದೆ. ನಿಮ್ಮ ಯಾವುದೇ ಸಲಹೆ, ಸಹಕಾರ & ಮಾರ್ಗದರ್ಶನಕ್ಕೆ ಸದಾ ಸ್ವಾಗತ. ಬನ್ನಿ ಕೊಡುವುದಕ್ಕೆ ನಮ್ಮಲ್ಲೇನಿದೆ ಎಂಬುದರ ಬದಲು ನಮ್ಮ ಅನಗತ್ಯದಲ್ಲಿ ಸ್ವಲ್ಪ ಮಿಗಿಸಿ ಈ ಸಮಾಜಕ್ಕೆ ನೀಡುವಲ್ಲಿ ಒಂದಾಗೋಣ.
ಹೆಚ್ಚಿನ ಮಾಹಿತಿಗಳಿಗಾಗಿ 8970143193, 9482521838 – Email- amruthasanjeevini@gmail.com ನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.