News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಪು ಮಾರಿಗುಡಿಗಳಲ್ಲಿ ಪ್ರಾಣಿಹತ್ಯೆ ಮಾಡುವಂತಿಲ್ಲ – ಜಿಲ್ಲಾಡಳಿತ ಆದೇಶ

animalಕಾಪು : ಕಾಪು ಮಾರಿಗುಡಿಗಳಲ್ಲಿ ನಡೆಯುವ ಮಂಗಳವಾರ – ಬುಧವಾರ ವಾರ್ಷಿಕ ಸುಗ್ಗಿ ಮಾರಿಪೂಜೆಯಲ್ಲಿ ಕೋಳಿ, ಕುರಿ ಕಡಿಯುವಂತಿಲ್ಲ ಎಂದು ಜಿಲ್ಲಾಡಳಿತ ನೀಡಿದ ಆದೇಶದಿಂದ ಸ್ಥಳದಲ್ಲಿ ನೀರವ ಮೌನ ಆವರಿಸಿದೆ.ಕೋಳಿ ಮಾರಾಟಕ್ಕಾಗಿ ನಿಗದಿ ಪಡಿಸಿದ ಸ್ಟಾಲುಗಳು ಖಾಲಿ ಖಾಲಿಯಾಗಿವೆ. ಹೂವು, ಹಣ್ಣು ಇನ್ನಿತರ ಅಂಗಡಿಗಳಲ್ಲಿ ಭರ್ಜರಿಯಾಗಿಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ. ಈ ಹಿಂದಿನ ಮಾರಿಪೂಜೆಯಲ್ಲಿ ಮಂಗಳವಾರ ಬೆಳಿಗ್ಗೆ ಮಾರಿಗುಡಿಗಳಲ್ಲಿ ಅಷ್ಠೇನು ಜನಸಂದಣಿ ಕಂಡು ಬರಲಿಲ್ಲ. ಆದರೆ ಈ ಮಂಗಳವಾರ ಬೆಳಿಗ್ಗಿನಿಂದಲೇ ಭಕ್ತಾಧಿಗಳು ಆಗಮಿಸಿ ದೇವರಿಗೆ ಹರಕೆ ಸಲ್ಲಿಸುತ್ತಿರುವುದು ಕಂಡು ಬಂದಿದೆ.

ಉಡುಪಿ ಜಿಲ್ಲಾಡಳಿತವು ನ್ಯಾಯಾಲಯದ ಆದೇಶ ಪಾಲಿಸಲು ಸನ್ನದ್ಧರಾಗಿ ಸುಮಾರು ಡಿಆರ್ ತುಕಡಿಯನ್ನು ನಿಯೋಜಿಸಿದೆ. ಕಾಪು, ಪಡುಬಿದ್ರಿ, ಶಿರ್ವ ಪೋಲೀಸರೂ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಕಳೆದ ಶುಕ್ರವಾರದಿಂದ ಕುರಿ, ಕೋಳಿ ಬಲಿಯ ಬಗ್ಗೆ ನಿಷೇಧ ಬಂದಿದ್ದರೂ, ಹೊಸ ಮಾರಿಗುಡಿಯ ಆಡಳಿತಾಧಿಕಾರಿ ಪ್ರಶಾಂತ್ ಶೆಟ್ಟಿ ಮತ್ತು ಮಾರಿಗುಡಿಗಳ ಆಡಳಿತ ಮಂಡಳಿ ಯಾವುದೇ ರೀತಿಯಾಗಿ ಜನರ ಭಾವನೆಗಳಿಗೆ ಸ್ಪಂಧಿಸದೆ ಇದ್ದುದೇ ಮೂಲ ಕಾರಣ. ಇವರು ಸ್ಥಳೀಯವಾಗಿ ಜನರೊಂದಿಗೆ ಬೆರೆತು ಸೌಹಾರ್ದಯುತವಾಗಿ ಸಮಸ್ಯೆಗೆ ಪರಿಹಾರ ಪಡೆಯಬಹುದಿತ್ತು. ಅಂತೆಯೇ ಗ್ರಾಮ ಪಂಚಾಯತ್ ಕೂಡಾ ಸ್ಪಂದಿಸದ ಕಾರಣ ಸಮಸ್ಯೆ ಉಲ್ಲಣಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಎಲ್ಲಾ ಪ್ರಕ್ರಿಯೆಯಲ್ಲಿ ಮಾರಿಗುಡಿಯ ಆಡಳಿತ ಮಂಡಳಿ ನಿರ್ಲಿಪ್ತ ದೋರಣೆಯನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ. ಈ ಹಿಂದೆ ಕುರಿ ಬಲಿಗೆ ಇಂತಿಷ್ಟು ಹಣ ಎಂದು ನಿಗದಿ ಪಡಿಸಿ ರಸೀದಿ ನೀಡುತ್ತಿದ್ದರು. ಕೋಳಿ ಅಥವಾ ಕುರಿ ಕಡಿಯಲು ಯಾವುದೇ ಹಣವನ್ನು ಸ್ವೀಕರಿಸುತ್ತಿಲ್ಲ ಎಂದು ಸುಳ್ಳು ಮಾತನ್ನು ಮಾರಿಗುಡಿ ಆಡಳಿತ ಮಂಡಳಿ ಹೇಳುತ್ತಿದೆ. ಕಾಪು ಗ್ರಾಮ ಪಂಚಾಯತ್ ಮತ್ತು ಮಾರಿಗುಡಿಗಳ ಆಡಳಿತ ಮಂಡಳಿ ಕೋಳಿ ಮಾರಾಟ ಹಾಗೂ ಕೋಳಿ ಮಾಂಸ ಮಾಡುವವರಿಂದ ಕರ ವಸೂಲಿ ಮಾಡುವವರು, ತಮಗೆ ಏನೂ ಸಂಬಂಧ ಇಲ್ಲ ಎಂದು ಕೈ ಕಟ್ಟಿ ಕುಳಿತು ಕೊಂಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.

ಮಂಗಳವಾರ ಬೆಳಿಗ್ಗೆ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಎಂ.ಅಮೀನ್ ನೇತೃತ್ವದಲ್ಲಿ ಮಾರಿಪೂಜೆಯ ದಿನ ಕೋಳಿ, ಕುರಿ ಕಡಿಯಲು ಆದೇಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಯನ್ನು ಆಯೋಜಿಸಿದ್ದರು. ಈ ಸಂದರ್ಭ ಎಲ್ಲಾ ಪಕ್ಷದವರು ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಿಂದ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಮಾತನಾಡಿ, ಸಾವಿರಾರು ವರ್ಷದಿಂದ ಮಾರಿ ಪೂಜೆ ನಿರಂತರವಾಗಿ ನಡೆಯುತ್ತಿದೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಯಾವುದೇ ಅಡತಡೆ ಮಾಡಬಾರದು. ಈ ಬಗ್ಗೆ ತಡೆಯಾಜ್ಞೆ ತಂದ ಪ್ರೇಮ್‌ರಾಜ್ ಕಿಣಿಯವರಿಗೆ ಧಿಕ್ಕಾರ. ನಾವು ಯಾವುದೇ ಅಡೆ ತಡೆ ಬಂದರೂ ನಾವು ಹರಕೆ ಕೊಡುತ್ತೇವೆ ಎಂದರು.

ಸ್ಥಳೀಯರಾದ ಲೀಲಾಧರ ಶೆಟ್ಟಿ ಮಾತನಾಡಿ, ಇಂದು ಜಿಲ್ಲಾಧಿಕಾರಿಯವರಿಗೆ ಮನವಿಯನ್ನಯ ನೀಡಿ, ಬಲಿಗೆ ಅನುವು ಮಾಡುವಂತೆ ಮನವಿ ಮಾಡಲು ಹೋಗುತ್ತಿದ್ದೇವೆ. ಜನರ ಭಾವನೆಗಳನ್ನು ಮನ್ನಿಸಿ, ಜಿಲ್ಲಾಧಿಕಾರಿಯವರು ಆದೇಶ ಹಿಂಪಡೆಯುತ್ತಾರೆ ಎಂದರು.

ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಮೆಂಡನ್, ಕಿಶೋರ್ ಕುಮಾರ್, ಅಬ್ದುಲ್ ಅಜೀಜ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top