ಮಂಗಳೂರು : ನೇತ್ರಾವತಿ ತಿರುವು ಮತ್ತು ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ನಗರದ ಪಂಪವೆಲ್ ಬಳಿ ಪಂಪವೆಲ್ ಬಂದ್ ಅನ್ನು ನಡೆಸಲಾಯಿತು. ಈ ಹೋರಾಟದಲ್ಲಿ ಸಾವಿರಾರು ಜನರು ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಡಾ.ನಿರಂಜನ ಅವರು ಮಾತನಾಡಿ ನೇತ್ರಾವತಿ ತಿರುವಿಗೆ ನಾವು ಬಿಡೆವು ನಮ್ಮ ನದಿಯ ಮೂಲವನ್ನು ತಿರುಗಿಸಲು ಬಿಡೆವು. ನಾವು ಬಯಲು ಸೀಮೆಗೆ ನೀರನ್ನು ಪೂರೈಸಲು ವಿರೋಧಿಸುತ್ತಿಲ್ಲ. ಆದರೆ ಅದಕ್ಕೆ ನೇತ್ರಾವತಿ ನದಿತಿರುವು ಸಲ್ಲದು. ಇಂದು ಇಲ್ಲಿ ಜಾತಿ ಮತ ಪಂಥಗಳನ್ನು ಮರೆತು ಈ ಹೋರಾಟದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸುಪ್ರೀಂಕೋರ್ಟ್ಗೆ, ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ .ಅಲ್ಲದೇ ಮಾಧ್ಯಮಗಳು ಕರಾವಳಿ ಭಾಗದ ಜನರಿಗೆ ಚಿಕ್ಕಮಗಳೂರು ಮತ್ತು ಕೋಲಾರ ಭಾಗದ ಜನರಿಗೆ ನೀರನ್ನು ನೀಡಲು ಮನಸ್ಸಿಲ್ಲ. ಅವರು ಆ ಭಾಗದ ವಿರೋಧಿಗಳು ಎಂದು ಬಿಂಬಿಸುತ್ತಿದೆ.
ಆದರೆ ನಮಗೆ ಬೇಸಿಗೆಗಾಲದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಮಳೆಗಾಲದಲ್ಲಿ ಮಾತ್ರ ಸರಿಯಾಗಿ ನೀರು ದೊರಕುತ್ತಿದೆ. ಕಳಾಸಾಬಂಡೂರಿಗೆ ರಾಜಕೀಯ ನಾಯಕರು ಬೀದಿಗೆ ಬಂದು ಹೋರಾಟ ನಡೆಸುತ್ತಿದ್ದು ನಮ್ಮ ಹೋರಾಟದ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷಿಸುತ್ತಿದೆ. ಈ ಯೋಜನೆ ರದ್ದಾಗುವ ತನಕ ಹೋರಾಟ ನಿಲ್ಲದು. ನಮ್ಮ ಜಿಲ್ಲೆಯ ಸಚಿವರು ಈ ಯೋಜನೆ ಬಗ್ಗೆ ಮಾತನಾಡದೇ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ವಿಜಯ ಕುಮಾರ್ ಶೆಟ್ಟಿ ಮಾತನಾಡಿ ಎತ್ತಿನಹೊಳೆ ವಿರೋಧಿಸಿ ಹೋರಾಟ ನಡೆಯುತ್ತಿದೆ. ಈ ಹೋರಾಟ ಈಗ ಜನಸಾಮಾನ್ಯರ ಹೋರಾಟವಾಗಿ ರೂಪುಗೊಂಡಿದೆ. ಅದಕ್ಕೆ ಯುವಕರ ಬೆಂಬಲ ದೊರಕಿರುವುದು ಸ್ವಾಗತಾರ್ಹ. ಇಂದು ಇದು ರಾಜಕೀಯ ರಹಿತ ಜಾತ್ಯಾತೀತ ಹೋರಾಟವಾಗಿ ನಡೆಯುತ್ತಿದೆ.
ಸರಕಾರ ಈಗ ಎಚ್ಚೆತ್ತುಕೊಳ್ಳದಿದ್ದರೆ ತುಳುರಾಜ್ಯ ಬೇಡಿಕೆ ಮುಂದಿಡಬೇಕಾಗುತ್ತದೆ. ಇಡೀ ರಾಜ್ಯದಲ್ಲಿ ಸರಕಾರಕ್ಕೆ ಹೆಚ್ಚಿನ ವಿತ್ತೀಯ ಸಂಗ್ರಹವಾಗುವುದು ದ.ಕ. ಜಿಲ್ಲೆಯಿಂದ, ನಮ್ಮನ್ನು ವಿಭಜನೆಯತ್ತ ಮುಖ ಮಾಡುವಂತೆ ಮಾಡಬೇಡಿ. ಒಂದೊಮ್ಮೆ ತುಳು ರಾಜ್ಯವಾದರೂ ಅದನ್ನು ಮುನ್ನೆಡೆಸುವ ಶಕ್ತಿ ಇಲ್ಲಿಯ ನಮ್ಮ ನಾಯಕರಲ್ಲಿದೆ ಎಂಬುದು ಸರಕಾರಕ್ಕೆ ತಿಳಿದಿರಲಿ. ಈಗಲಾದರು ಯೋಜನೆಯನ್ನು ರದ್ದುಗೊಳಿಸಿ. ಯೋಜನೆ ರದ್ದು ಗೊಳ್ಳದೆ ಹೋರಾಟ ನಿಲ್ಲದು ಎಂದರು.
ಈ ಹೋರಾಟಕ್ಕೆ ವಿವಿಧ ಸಂಘಟನೆಯು ಬೆಂಬಲ ನೀಡಿದ್ದು ಅನೇಕ ಸಂಘಟನೆಯ ಮುಖಂಡರು ಪಕ್ಷಾತೀತವಾಗಿ ರಾಜಕೀಯ, ಧಾರ್ಮಿಕ ಮತ್ತು ಸಂಘ-ಸಂಸ್ಥೆ ಸಂಘಟನೆಯ ಮುಖಂಡರು ಭಾಗವಹಿಸಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.