ತಿರುವನಂತಪುರಂ: ತನ್ನ ನಾಸ್ತಿಕ ಧೋರಣೆಗಳನ್ನು ಬದಿಗಿಟ್ಟು ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲು ಮುಂದಾಗಿದೆ ಸಿಪಿಎಂ ಪಕ್ಷ. ಶನಿವಾರ ಕೇರಳದಾದ್ಯಂತ ಇದು ಸಾಂಪ್ರದಾಯಿಕ ರೀತಿಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸುತ್ತಿದೆ.
ಮಕ್ಕಳಿಗೆ ಕೃಷ್ಣ, ರಾಧೆಯರ ಉಡುಪನ್ನು ಧರಿಸಿ ಮೆರವಣಿಗೆ ನಡೆಸಲಿದೆ, ಸಿಹಿ ಹಂಚಲಿದೆ. ಸಿಪಿಐನ ಮಕ್ಕಳ ಸಂಘ ‘ಬಾಲಸಂಘಂ’ ನೇತೃತ್ವದಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ.
ನಾಸ್ತಿಕ ಪಕ್ಷ ಎಂದೇ ಗುರುತಿಸಿಕೊಂಡಿರುವ ಸಿಪಿಎಂ ಇದಕ್ಕಿದ್ದಂತೆ ಕೃಷ್ಣನನ್ನು ಸ್ಮರಿಸುತ್ತಿರುವುದೇಕೆ? ಕೃಷ್ಣ ಏನಾದರೂ ಇವರಿಗೆ ಜ್ಞಾನೋದಯ ಮಾಡಿಸಿದನೇ? ಖಂಡಿತಾ ಇಲ್ಲ. ಬಿಜೆಪಿಯ ಭಯ, ಸಂಘಪರಿವಾರದ ಹೆಚ್ಚುತ್ತಿರುವ ಬಲ ಇವರನ್ನು ಕೃಷ್ಣಜನ್ಮಾಷ್ಟಮಿ ಆಚರಿಸುವಂತೆ ಮಾಡಿದೆ.
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಬಲ ಹೆಚ್ಚುತ್ತಿದೆ. ಅಲ್ಲಿ ಬಿಜೆಪಿಯ ಮತ ಹಂಚಿಕೆ ಹೆಚ್ಚಾಗುತ್ತಿರುವುದು ಇತ್ತೀಚಿನ ಚುನಾವಣೆಯಿಂದ ಸಾಬೀತಾಗಿದೆ. ಆರ್ಎಸ್ಎಸ್ ಸೇರಿದಂತೆ ಇತರ ಹಿಂದೂ ಸಂಘಟನೆಗಳು ಬಲಿಷ್ಠವಾಗುತ್ತಿದೆ. ಅಲ್ಲಿನ ಜನ ಇತ್ತ ಕಡೆ ಆಕರ್ಷಿತರಾಗುತ್ತಿದ್ದಾರೆ. ಇದೆಲ್ಲವೂ ಈಗಾಗಲೇ ಅಧಿಕಾರ ಕಳೆದುಕೊಂಡಿರುವ ಸಿಪಿಎಂನ್ನು ಆತಂಕಕ್ಕೀಡು ಮಾಡಿದೆ. ನಮ್ಮ ಹಳೇ ಸಿದ್ಧಾಂತಗಳಿಗೆ ಕಟ್ಟುಬಿದ್ದರೆ ಜನ ನಮ್ಮಿಂದ ದೂರವಾಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿಯೇ ಜನರ ಧಾರ್ಮಿಕ ನಂಬಿಕೆಗಳಿಗೂ ತುಸು ಮನ್ನಣೆ ಕೊಡಲು ಇವರು ಮುಂದಾಗಿದ್ದಾರೆ.
ಹೀಗಾಗಿ ತಮ್ಮ ಕಟ್ಟಾ ನಾಸ್ತಿಕತೆಯನ್ನು ಬದಿಗೊತ್ತಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದಾರೆ. ಇದಕ್ಕೆ ಪಕ್ಷದೊಳಗೆ ಕೆಲವರು ಅಪಸ್ವರ ಎತ್ತಿದ್ದಾರೆ. ಇನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ನಾವು ಧರ್ಮಕ್ಕೆ ವಿರುದ್ಧವಾಗಿಲ್ಲ, ಕೋಮುವಾದಕ್ಕೆ ಮಾತ್ರ ವಿರುದ್ಧವಾಗಿದ್ದೇವೆ ಎಂದು ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಹೇಳಿಕೊಂಡಿದ್ದಾರೆ.
ಅದೇನೆಯಿರಲಿ ಕುಗ್ಗುತ್ತಿರುವ ಬಲ ಸಿಪಿಎಂನ್ನು ಆಧ್ಯಾತ್ಮಿಕ ಪಥದತ್ತ ಸಾಗುವಂತೆ ಮಾಡಿದ್ದಂತೂ ನಿಜ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.