ಬೆಳ್ತಂಗಡಿ : ಅಪಘಾತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಇಂಧನ ತುಂಬಿದ ಟ್ಯಾಂಕರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ, ಉರುಳಿ ಬಿದ್ದು ಬೆಂಕಿಗಾಹುತಿಯಾದ ದುರಂತ ಘಟನೆ ಪಟ್ಟಣದ ಸನಿಹ ಲಾಯಿಲ ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ. ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗುರುವಾಯನಕರೆಯ ಅಗ್ನಿಶಾಮಕ ದಳದ ಸಕಾಲಿಕ ಮತ್ತು ಶೀಘ್ರ ಕಾರ್ಯಾಚರಣೆಯಿಂದ ಮಹಾಸ್ಫೋಟವಾಗುವುದು ತಪ್ಪಿದೆ.
ಲಾಯಿಲದ ಸಿರಿ ಕೇಂದ್ರದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚರ್ ವಾಹನವೊಂದು ರಿವರ್ಸ್ ತೆಗೆಯುತ್ತಿತ್ತು. ಆ ಸಂದರ್ಭ ಹಿಂದಿನಿಂದ ಬೈಕ್ ಸವಾರನೊಬ್ಬ ಮಗುವನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದರು. ಟೆಂಪೋ ತನ್ನ ಮೇಲೆ ಬರುತ್ತಿದೆಯೆಂದು ಮನಗಂಡ ಬೈಕ್ ಸವಾರ ಆತನೂ ಹಿಂದಿರುಗಿಸಲು ಪ್ರಯತ್ನ ಪಟ್ಟ. ಇದೇ ವೇಳೆ ಎದುರಿನಿಂದ ಡಿಸೇಲ್ ತುಂಬಿದ್ದ ಟ್ಯಾಂಕರ್ ಚಾಲಕ ಬೈಕ್ನ್ನು ತಪ್ಪಿಸುವ ಸಲುವಾಗಿ ವಾಹನವನ್ನು ಬದಿಗೆ ತಂದಾಗ ನಿಯಂತ್ರಣ ತಪ್ಪಿ ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಮಾತ್ರವಲ್ಲದೆ ರಸ್ತೆಬದಿಯಲ್ಲಿ ಟ್ಯಾಂಕರ್ ಮಣ್ಣಿನಲ್ಲಿ ಕುಸಿದು ಉರುಳಿ ಬಿತ್ತು. ವಿದ್ಯುತ್ ತಂತಿಗಳ ಘರ್ಷಣೆಯಿಂದ ಟ್ಯಾಂಕರ್ಗೆ ಬೆಂಕಿ ಹತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಟ್ಯಾಂಕರ್ ಧಗಧಗನೇ ಉರಿಯತೊಡಗಿತು. ಟ್ಯಾಂಕರ್ ಚಾಲಕ ಕಡಿರುದ್ಯಾವರದ ಸುರೇಶ್ ಗೌಡ ಹಾಗೂ ಸಿಬ್ಬಂದಿ ತಕ್ಷಣವೇ ಗಾಜನ್ನು ಒಡೆದು ಹೊರಬಿದ್ದು ಪ್ರಾಣ ಉಳಿಸಿಕೊಂಡರು.
ಬೆಂಕಿ ಹತ್ತಿಕೊಂಡ ಹತ್ತು ನಿಮಿಷಗಳಲ್ಲೇ ಗುರುವಾಯನಕೆರೆಯ ಅಗ್ನಿಶಮನ ವಾಹನ ಬಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿತು. ಕೆಲ ಹೊತ್ತಿನಲ್ಲೆ ಇನ್ನೊಂದು ಅಗ್ನಿಶಾಮನ ವಾಹನವನ್ನು ಕರೆಸಲಾಯಿತು. ಹದಿನೈದು ನಿಮಿಷಗಳಲ್ಲಿ ಬೆಂಕಿಯನ್ನು ತಹಬದಿಗೆ ತರಲಾಯಿತು. ಇದರಿಂದ ಮಹಾಸ್ಫೋಟ ತಪ್ಪಿದಂತಾಗಿದೆ. ಆದರೆ ವಾಹನ ಪೂರ್ತಿ ಸುಟ್ಟು ಭಸ್ಮವಾಗಿದೆ. ಡಿಸೇಲ್ ತುಂಬಿತ್ತಾದರೂ ಸ್ಫೋಟವೇನೂ ಸಂಭವಿಸಿಲ್ಲ. ವಾಹನದ ಟಯರ್ ಸ್ಪೋಟಗೊಂಡಿದೆ. ಟ್ಯಾಂಕರ್ ಮಂಗಳೂರಿನಿಂದ ಉಜಿರೆಗೆ ಹೋಗುತ್ತಿತ್ತು.
ಈ ಘಟನೆಯಿಂದಾಗಿ ಎರಡು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ಸಾರ್ವಜನಿಕರು ಸೇರಿ ಅದನ್ನು ಮಾರ್ಗದ ಬದಿಗೆ ಸರಿಸಿದ್ದಾರೆ. ಸುಮಾರು ಒಂದೂವೆರೆ ತಾಸು ೯ ಕಿ.ಮೀ. ಉದ್ದದ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಾಲು ಇದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಬೆಂಕಿ ನಂದಿಸಿದ ಬಳಿಕ ಮತ್ತು ವಿದ್ಯುತ್ ತಂತಿಗಳನ್ನು ರಸ್ತೆಯಿಂದ ತೆರವುಗೊಳಿಸಿದ ಬಳಿಕ ಸುಗಮ ವಾಹನ ಸಂಚಾರಕ್ಕೆ ಬೆಳ್ತಂಗಡಿ ಪೋಲಿಸರು ಅನುವು ಮಾಡಿಕೊಟ್ಟರು. ಸುಮಾರು ಒಂದು ಗಂಟೆಯ ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯ ಸಾರ್ವಜನಿಕರು ಸಹಕರಿಸಿದ್ದಾರೆ.
ಅಗ್ನಿ ಶಾಮಕ ದಳದ ಜಿಲ್ಲಾಮಟ್ಟದ ಅಧಿಕಾರಿ ಪರಮೇಶ್ವರ್, ಠಾಣಾಧಿಕಾರಿ ಕ್ಲೇವೀಸ್ ಡಿಸೋಜ, ಬೆಳ್ತಂಗಡಿ ತಹಸೀಲ್ದಾರ್ ಬಿ.ಎಸ್.ಪುಟ್ಟಸ್ವಾಮಿ, ಮೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಸಹಾಯಕ ಇಂಜಿನಿಯರ್ ಶಿವಶಂಕರ್, ಎಸ್ಐಗಳಾದ ಮಾಧವ ಕೂಡ್ಲು, ಚಂದ್ರಶೇಖರ್ ಮತ್ತಿತರ ಸಿಬ್ಬಂದಿಗಳು ಇದ್ದರು.
ದುರಂತ ನಡೆದ ಸನಿಹದಲ್ಲೇ ಸುಮಾರು ಐದಾರು ಮನೆಯವರು ಭಯಭೀತರಾಗಿದ್ದು ಹೊರಗೋಡಿ ಬಂದಿದ್ದಾರೆ. ಶಾಲೆ, ಕಾಲೇಜು ಬಿಡುವ ಸಮಯವಾದ್ದರಿಂದ ಘಟನೆಯನ್ನು ವೀಕ್ಷಿಸಲು ಸಾವಿರಾರು ವಿದ್ಯಾರ್ಥಿಗಳು ಸೇರಿದ್ದರು. ನೂರಾರು ಮೊಬೈಲುಗಳು ಬೆಂಕಿಯ ಪ್ರತಾಪವನ್ನು ಚಿತ್ರೀಕರಣ ಮಾಡುವಲ್ಲಿ ನಿರತವಾಗಿದ್ದವು. ಬೆಂಕಿ ನಂದಿಸಿದ ಬಳಿಕ ತಕ್ಷಣವೇ ಡಿಸೇಲ್ ತುಂಬಿಸಿಕೊಳ್ಳಲು ಕೆಲವರು ಬ್ಯಾರೇಲ್ಗಳು ಹಿಡಿದುಕೊಂಡು ಬಂದು ದುರಂತದ ಲಾಭ ಪಡೆಯಲು ತವಕಿಸುತ್ತಿರುವುದು ಕಂಡು ಬಂತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.