News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಇಟಿ : ‘ತಪಸ್’ ವಿದ್ಯಾರ್ಥಿಗಳ ಸಾಧನೆ

ಬೆಂಗಳೂರು : ರಾಜ್ಯದ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗುವ ರಾಷ್ಟ್ರೋತ್ಥಾನ ಪರಿಷತ್‌ನ ಯೋಜನೆಯಾದ ’ತಪಸ್’ನಲ್ಲಿ ಶಿಕ್ಷಣ ಪಡೆದ 26 ಮಂದಿ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಹಾಗೂ ಸಿಇಟಿಯಲ್ಲಿ 7 ಮಂದಿ 1000 ದೊಳಗಿನ ರ್‍ಯಾಂಕ್ ಗಳಿಸಿದ್ದಾರೆ. 25 ಮಂದಿ ವಿದ್ಯಾರ್ಥಿಗಳು ಪ್ರತಿಷ್ಠಿತ JEE-Main (Joint Entrance Examination)  ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

2016-17 ನೇ ಸಾಲಿನಲ್ಲಿ ತಪಸ್ ಯೋಜನೆಯ 33 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಹುಣಸಮಾರನಹಳ್ಳಿಯ ಸಾಮಾನ್ಯ ಬಡಕುಟುಂಬಕ್ಕೆ (ತಂದೆ ಸೆಕ್ಯುರಿಟಿ, ತಾಯಿ ಗೃಹಿಣಿ) ಸೇರಿದ ಸಮರ್ಥ ಪಿ. ಅವರು ಸಿಇಟಿಯಲ್ಲಿ 289 ನೇ ರ್‍ಯಾಂಕ್ ಗಳಿಸಿದ್ದಾನೆ. ಮಾತ್ರವಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್‌ನಲ್ಲಿ 100, ರಸಾಯನಶಾಸ್ತ್ರದಲ್ಲಿ 99, ಭೌತಶಾಸ್ತ್ರ ಮತ್ತು ಗಣಿತದಲ್ಲಿ 98 ಅಂಕ ಸೇರಿದಂತೆ ಒಟ್ಟು 583 ಅಂಕಗಳನ್ನು (ಶೇ. 97.17) ಗಳಿಸಿದ್ದಾನೆ. ಜೊತೆಗೆ ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆಗೂ (ಜೆಇಇ ಮೈನ್ಸ್) ಸಮರ್ಥ ಆಯ್ಕೆಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಳ್ಳಿಯೊಂದರ ಕೃಷಿಕ ಕುಟುಂಬದ ಸಮರ್ಥ ಹಾದಿಮನಿ ಸಿಇಟಿಯಲ್ಲಿ 290 ನೇ ರ್‍ಯಾಂಕ್ ಗಳಿಸಿದ್ದಾನೆ. ಗಣಿತದಲ್ಲಿ 99 ಅಂಕ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ 98 ಅಂಕ ಹಾಗೂ ಎಲೆಕ್ಟ್ರಾನಿಕ್ಸ್‌ನಲ್ಲಿ 95 ಅಂಕ ಸೇರಿದಂತೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 563 (ಶೇ. 93.83) ಅಂಕ ಗಳಿಸಿದ ಸಮರ್ಥ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ದೇಶದಲ್ಲಿಯೇ 566 ನೇ ರ್‍ಯಾಂಕ್ ಗಳಿಸಿ ಜೆಇಇ ಮೈನ್ಸ್ ಪರೀಕ್ಷೆಗೆ ಆಯ್ಕೆಯಾಗಿದ್ದಾನೆ.

ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಹಳ್ಳಿಯ ಅನಕ್ಷರಸ್ಥ ಕೂಲಿ ಕಾರ್ಮಿಕ ಕುಟುಂಬದಿಂದ ಬಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಂತರಾಜ್ ತಪಸ್ ಯೋಜನೆಯ ಲಾಭ ಪಡೆದು ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ 547 (ಶೇ. 91.17) ಅಂಕ ಗಳಿಸಿದ್ದಾನೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾಂತರಾಜ್ ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ದೇಶದಲ್ಲಿಯೇ 1720 ನೇ ರ್‍ಯಾಂಕ್ ಗಳಿಸಿದ್ದಾನೆ. ಜೊತೆಗೆ ಸಿಇಟಿಯಲ್ಲಿ 1077 ನೇ ರ್‍ಯಾಂಕ್ ಗಳಿಸಿದ್ದಾನೆ.

ಹಿರೇಕೆರೂರು ತಾಲೂಕಿನ ಕೃಷಿಕ ಕುಟುಂಬದ ಶಿವರಾಜ್ ಬಿ.ಕೆ. ರಾಜ್ಯಕ್ಕೆ 592 ನೇ ರ್‍ಯಾಂಕ್ ಗಳಿಸಿದ್ದಾನೆ. ಜೊತೆ ದ್ವಿತೀಯ ಪಿಯುಸಿಯಲ್ಲಿಯೂ ಗಣಿತದಲ್ಲಿ 100  ಅಂಕ ಸೇರಿದಂತೆ 541 ಅಂಕ ಗಳಿಸಿದ್ದಾನೆ. ಐಐಟಿ ಅರ್ಹತಾ ಪರೀಕ್ಷೆಗೂ ಅರ್ಹತೆ ಪಡೆದಿದ್ದಾನೆ.

ತಪಸ್ ಯೋಜನೆಯ ಇಬ್ಬರು 500 ರ ಒಳಗಿನ ರ್‍ಯಾಂಕ್ ಗಳಿಸಿದರೆ, ಒಟ್ಟು 7 ಮಂದಿ 1000 ದ ಒಳಗಿನ ರ್‍ಯಾಂಕ್ ಗಳಿಸಿದ್ದಾರೆ. 11 ಮಂದಿ 1000 ದಿಂದ 2000 ದ ಒಳಗಿನ ರ್‍ಯಾಂಕ್ ಗಳಿಸಿದ್ದಾರೆ. 8 ಮಂದಿ 2000 ದಿಂದ 5000 ದ ಒಳಗಿನ ರ್‍ಯಾಂಕ್ ಗಳಿಸಿದ್ದಾರೆ.

ತಪಸ್
ಶಿಕ್ಷಣದಲ್ಲಿ ಪ್ರತಿಭಾವಂತರಾಗಿರುವ ಅರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಕುಟುಂಬದ ಮಕ್ಕಳಿಗೆ ಪಿಯುಸಿ ಶಿಕ್ಷಣದ ಜೊತೆಗೆ ಐಐಟಿ-ಜೆಇಇ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿದಂತೆ ವಸತಿ ಸಹಿತ ಸಂಪೂರ್ಣ ಶಿಕ್ಷಣವನ್ನು ಉಚಿತವಾಗಿ ನೀಡುವ ರಾಷ್ಟ್ರೋತ್ಥಾನ ಪರಿಷತ್ತಿನ ಯೋಜನೆಯೇ ತಪಸ್. ರಾಜ್ಯದ ಎಲ್ಲ ಜಿಲ್ಲೆಗಳು ಸೇರಿದಂತೆ ಒಟ್ಟು 40 ಕ್ಕೂ ಹೆಚ್ಚು ಕಡೆಗಳಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಒದಗಿಸಲಾಗುತ್ತದೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ಬೇಸ್ ಮತ್ತು ರಾಷ್ಟ್ರೋತ್ಥಾನ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top