ಕೊಣಾಜೆ: ಬಂಟ್ವಾಳ ತಾಲೂಕು ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ, ಗೋಹಂತಕರ ಸೆರೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಬುಧವಾರ ಆರನೇ ದಿನಕ್ಕೆ ಕಾಲಿರಿಸಿದೆ. ಸ್ಥಳೀಯ ಗೋಪ್ರೇಮಿಗಳಲ್ಲದೆ ಮಂಗಳೂರು, ಉಪ್ಪಿನಂಗಡಿ, ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ, ಪೆರ್ಲ, ಬಾಯಾರು ಭಾಗಗಳಿಂದಲೂ ಜನ ಆಗಮಿಸಿ ಆಮರಣಾಂತ ಉಪವಾಸ ನಿರತ, ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಅವರಿಗೆ ಬೆಂಬಲ ನೀಡಿದರು. ಈವರೆಗೆ ಪ್ರತಿ ದಿನವೂ ಸಾವಿರಾರು ಮಂದಿ ಗೋಪ್ರೇಮಿಗಳು ಈ ಸತ್ಯಾಗ್ರಹವನ್ನು ಬೆಂಬಲಿಸಿ ಇಲ್ಲಿಗೆ ಆಗಮಿಸುತ್ತಿದ್ದಾರೆ.
ಗೋಪ್ರೇಮಿಗಳಲ್ಲದೆ ಹಿಂದೂ ಸಂಘಟನೆಯ ಪ್ರಮುಖರು, ವಿವಿಧ ಮಠಾಧೀಶರು ಸಹಿತ ಹಲವಾರು ಗಣ್ಯರು ಬೆಂಬಲ ಸೂಚಿಸಿದ್ದಾರೆ.
ಕೆಲ ದಿನಗಳ ಹಿಂದೆ ದುಷ್ಕರ್ಮಿಗಳ ಗುಂಪು ತಲವಾರು ತೋರಿಸಿ ಗೋಶಾಲೆಯಲ್ಲಿನ ಗೋವನ್ನು ಕದ್ದೊಯ್ದಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದರು ಎಂದು ರಾಜಾರಾಂ ಭಟ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದರಲ್ಲಿ ಒಬ್ಬ ದನ ಕಡಿಯುವಾತ, ಮತ್ತೊಬ್ಬ ಮಾಂಸ ಮಾರಾಟ ಮಾಡುವವನು. ಆದರೆ ತಲವಾರು ತೋರಿಸಿ ಗೋವನ್ನು ಕದ್ದೊಯ್ದವನ ಬಂಧನ ಇನ್ನೂ ಆಗಿಲ್ಲ. ದಾರಿಯಲ್ಲಿ ಹೋಗುವಾತನ ಬಂಧಿಸಿದರೆ ಗೋಕಳ್ಳತನಕ್ಕೆ ಅಂತ್ಯ ಬೀಳುವುದಿಲ್ಲ. ಗೋಕಳ್ಳರ ಮನಸ್ಥಿತಿಯನ್ನು ಅಂತ್ಯಗೊಳಿಸಬೇಕು ಎಂದಿದ್ದಾರೆ.
ನಿಜವಾದ ಆರೋಪಿಗಳ ಬಂಧನ ಆಗುವವರೆಗೂ ಉಪವಾಸ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಪೊಲೀಸರಿಂದ ಮನವೊಲಿಕೆ ಯತ್ನ
ಈ ನಡುವೆ ಧರಣಿ ನಿರತರನ್ನು ಭೇಟಿ ಮಾಡಿದ ಪೊಲೀಸ್ ಅಧಿಕಾರಿಗಳು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಮತ್ತೂಮ್ಮೆ ಭರವಸೆ ನೀಡಿ, ಉಪವಾಸ ಕೈಬಿಡುವಂತೆ ಮನ ವೊಲಿಸಲು ಯತ್ನಿಸಿದರೂ ಅದು ಫಲ ನೀಡಲಿಲ್ಲ. ಆರೋಪಿಗಳನ್ನು ಬಂಧಿಸುವ ತನಕ ಉಪವಾಸ ಸತ್ಯಾಗ್ರಹ ಮುಂದು ವರಿಸುವುದಾಗಿ ರಾಜಾರಾಮ ಭಟ್ ಅವರು ಘೋಷಿದರು. ಪ್ರತೀ ರಾತ್ರಿ ಜಾಗರಣೆಯೊಂದಿಗೆ ಗೋಪ್ರೇಮಿಗಳು ಧರಣಿ ನಡೆಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಆಂದೋಲನ: ಶರಣ್ ಪಂಪ್ವೆಲ್
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ಹಿಂದೂ ಸಮಾಜಕ್ಕೆ ಗೋಕಳ್ಳರು ಸವಾಲು ಹಾಕುತ್ತಿದ್ದಾರೆ. ಗೋಕಳ್ಳತನ ಮಾಡುವ ಜತೆಗೆ ತಲವಾರು ಝಳಪಿಸಿ, ಗೋಪ್ರೇಮಿಗಳನ್ನು ಬೆದರಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ಪ್ರತಿಭಟಿಸಿದರೂ ನ್ಯಾಯ ಸಿಕ್ಕಿಲ್ಲ. ರಾಜಾರಾಮ ಭಟ್ ಅವರಂತೆ ಆಮರಣಾಂತ ಸತ್ಯಾಗ್ರಹಕ್ಕೆ ಹಿಂದೂ ಸಂಘಟನೆಗಳು ಸಾಥ್ ನೀಡಲಿದ್ದು ಜಿಲ್ಲೆಯಾದ್ಯಂತ ಆಂದೋಲನ ನಡೆಸಲಾಗುವುದು ಎಂದರು.
ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಿ- ಕೊಂಡೆಯೂರು ಶ್ರೀ
ಕಳೆದ ಎ. 3ರಂದು ಬೆಳಗ್ಗೆ 11ಕ್ಕೆ ಪುಣ್ಯ ಕೋಟಿ ನಗರದಲ್ಲಿ ಜಿಲ್ಲೆಯಾದ್ಯಂತ ಗೋವುಗಳನ್ನು ಕಳೆದುಕೊಂಡವರ ಸಮಾವೇಶದಲ್ಲಿ ಕೊಂಡೆವೂರು ಆಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಸತ್ಯಾಗ್ರಹ ನಿರತರನ್ನು ಭೇಟಿ ಮಾಡಿ, ಕೃಷಿಕರ ಜೀವನಾಡಿ ಗೋವುಗಳನ್ನು ಅಪಹರಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ, ಗೋಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆ ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಇಂದು ಕೈರಂಗಳಕ್ಕೆ ಶ್ರೀ ರಾಘವೇಶ್ವರ ಶ್ರೀಗಳು ಭೇಟಿ
ಇಂದು ಮಧ್ಯಾಹ್ನ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಕೈರಂಗಳಕ್ಕೆ ಭೇಟಿ ನೀಡಿ ಗೋರಕ್ಷಣೆಗಾಗಿ ಮಾಡುವ ಸತ್ಯಾಗ್ರಹಕ್ಕೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ. ಅವರು ಈ ಮೊದಲು ತಮ್ಮ ಸಂದೇಶದಲ್ಲಿ ಪುಣ್ಯಕೋಟಿ ಗೋಶಾಲೆ ಯಲ್ಲಿ ನಡೆದ ಹೇಯ ಕೃತ್ಯ ನಮ್ಮ ಹೃದಯಕ್ಕೆ ಅತ್ಯಂತ ಘಾಸಿ ತಂದಿದೆ. ಆಯುಧ ಧಾರಿ ಗೋಹಂತಕರು ಹಾಡಹಗಲೇ ರಾಜಾರೋಷವಾಗಿ ಗೋಶಾಲೆಗೆ ನುಗ್ಗಿ ಗೋವನ್ನು ದರೋಡೆ ಮಾಡಿದ್ದು ಅತ್ಯಂತ ಘೋರ ಘಟನೆಯಾಗಿದೆ.ಮಾನವೀಯತೆಗೆ ಮಾರಕರಾದ ಇಂತಹ ಕ್ರೂರಿಗಳನ್ನು ಕೂಡಲೇ ಪತ್ತೆಹಚ್ಚಬೇಕಿದೆ. ತಪ್ಪಿತಸ್ಥರಿಗೆ ಅತ್ಯುಗ್ರ ಶಿಕ್ಷೆಯನ್ನು ನೀಡಬೇಕೆಂದು ಶ್ರೀ ರಾಮಚಂದ್ರಾಪುರ ಮಠ ಆಗ್ರಹಿಸುತ್ತದೆ ಎಂದು ಹೇಳಿದ್ದರು.
ಧರಣಿ ಪರಿಸರದಲ್ಲಿ ರಾಮಾಯಣ, ಭಾಗವತ ಪಾರಾಯಣ ನಡೆಯುತ್ತಿದ್ದರೆ ಮಹಿಳೆಯರು ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಮತ್ತಿತರ ದೇವತಾ ಕಾರ್ಯಗಳಲ್ಲೂ ನಿರತರಾಗಿದ್ದಾರೆ. ಇಡೀ ರಾತ್ರಿ ಸೇರಿದಂತೆ ದಿನವೂರ್ತಿ ಸತ್ಯಾಗ್ರಹ ನಿರಂತರವಾಗಿ ನಡೆಯುತ್ತಿದ್ದು, ಸರದಿಯಂತೆ ಗೋಪ್ರೇಮಿಗಳು ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಧ್ಯೆ ರಾಜಾರಾಮ ಭಟ್ ಅವರ ಆರೋಗ್ಯ ತಪಾಸಣೆಯನ್ನು ಸರಕಾರಿ ವೈದ್ಯರು ನಡೆಸಿರು ಹಾಗೂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.